ಟಿವಿ ಚಾನಲ್ಲುಗಳಿಗೆ ಸದನ ಸಮಿತಿ ಸಮನ್ಸ್
ಚುನಾವಣೆ ಮುಂದೂಡಲೊಲ್ಲದ ಸರಕಾರದ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಅಂದಿನ ಸಭೆಯಲ್ಲಿ ಉದ್ದಕ್ಕೂ ಹರಿಹಾಯ್ದಿದ್ದರು. ವಾಗ್ವಾದಗಳು, ಕೈಕೈ ಮಿಲಾಯಿಸುವುದು, ಮೈಕು ಕಿತ್ತುಕೊಳ್ಳುವುದು, ಏರಿದ ಧ್ವನಿಯಲ್ಲಿ ಅರಚುವುದು, ಹಾಳೆಗಳನ್ನು ಗಾಳಿಗೆ ತೂರುವುದು ಮುಂತಾದ ಚಟುವಟಿಕೆಗಳಲ್ಲಿ ಸದಸ್ಯರು ಚಲನಶೀಲರಾಗಿದ್ದರು. ಟಿವಿ ಚಾನಲ್ಲುಗಳಲ್ಲಿ ಸಭೆಯಲ್ಲಿ ನಡೆದ ಈ ಪಂದ್ಯಾಟಗಳನ್ನು ನೇರವಾಗಿ ಬಿತ್ತರಿಸಿದವು. ಇದನ್ನು ವೀಕ್ಷಿಸಿದ ಜನತೆಗೆ ಇದೇನು ಸಭೆಯೋ ಅಥವಾ ಫಿಶ್ ಮಾರ್ಕೆಟ್ಟೋ ಎಂಬ ಅನುಮಾನ ಮೂಡಿತ್ತು.
ವಿಧಾನಸಭೆಯ ಅಂದಿನ ಕಲಾಪಗಳನ್ನು ಕೆಲವು ಟಿವಿ ಚಾನಲ್ಲುಗಳು ನೇರ ಪ್ರಸಾರ ಮಾಡಿದವಷ್ಟೆ. ಆದರೆ, ಆ ಪ್ರಸಾರಗಳನ್ನು ಚಾನಲ್ಲುಗಳು ನ್ಯಾಯಸಮ್ಮತವಾಗಿ, ಸರಿಯಾಗಿ, ಸಮರ್ಪಕವಾಗಿ, ಪಕ್ಷಬೇಧವಿಲ್ಲದೆ ಮಾಡಿಲ್ಲವೆಂದು ಶಾಸಕಾಂಗ ಸದನ ಸಮಿತಿಯ ಚೇರ್ಮನ್ ಹೇಮಚಂದ್ರ ಸಾಗರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಅಂದಿನ ಸುದ್ದಿ ಚಿತ್ರಗಳನ್ನು ಪ್ರಸಾರ ಮಾಡಿದ ಚಾನಲ್ಲುಗಳಿಗೆ ಸಮನ್ಸುಗಳನ್ನು ಕಳಿಸಲು ಅಧಿಕಾರಿಗಳಿಗೆ ಆಜ್ಞಾಪಿಸಿದ್ದಾರೆ. ಸಾಗರ್ ಅವರು ಹೊರಡಿಸಿರುವ ಆದೇಶ ಪತ್ರದಲ್ಲಿ, "etv, kasturi, zee kannada, udaya ಮುಂತಾದ ಚಾನಲ್ಲುಗಳ ಮುಖ್ಯಸ್ಥರು ಬುಧವಾರ ಬೆಳಗ್ಗೆ 11.30 ಗಂಟೆಗೆ ವಿಧಾನಸಭೆಯಲ್ಲಿ ವಿಶೇಷ ಸದನ ಸಮಿತಿಯ ಮುಂದೆ ಹಾಜರಾಗಬೇಕು" ಎಂದು ಹೇಳಲಾಗಿದೆ.
ಮಾಧ್ಯಮಗಳು ತಮಗೆ ಯಾವುದು ಮುಖ್ಯವೆನಿಸುತ್ತದೋ ಆ ಚಿತ್ರಗಳನ್ನು ಸೆರೆಹಿಡಿಯುತ್ತಾರೆ. ಎಲ್ಲಿ ಸುದ್ದಿಚಿತ್ರ ಕಾಣಿಸುತ್ತದೋ ಅಲ್ಲೆಲ್ಲ ಕ್ಯಾಮರಾ ಕಣ್ಣು ಸುಳಿದಾಡುತ್ತದೆ. ಯಾವುದು ಸುದ್ದಿ ಚಿತ್ರ ಯಾವುದು ಸುದ್ದಿ ಚಿತ್ರ ಅಲ್ಲ ಎನ್ನುವುದು ಚಾನಲ್ಲುಗಳ ಸುದ್ದಿ ಸಂಪಾದಕರಿಗೆ ಬಿಟ್ಟ ವಿಚಾರವಾಗಿರುತ್ತದೆ. ಅದನ್ನು ಹೊರಗಿನವರು ಎಡಿಟ್ ಅಥವಾ ಡಿಕ್ಟೇಟ್ ಮಾಡುವುದಕ್ಕೆ ಸಾಧ್ಯವಿಲ್ಲ, ಸಾಧ್ಯವಾಗಕೂಡದು. ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ದೇವೇಗೌಡರು 'ಯಾವನ್ರೀ ಅವನು ಸಿಎಂ...' ಎಂಬಿತ್ಯಾದಿಯಾಗಿ ಹೇಳಿದುದನ್ನು ಚಿತ್ರೀಕರಿಸಿಕೊಂಡ ಚಾನಲ್ಲುಗಳು 24 ಗಂಟೆ ಲೂಪು ಹಾಕಿ ತೋರಿಸಿದ್ದೇ ತೋರಿಸಿದವು. ಬೇಡ ಅನ್ನಕ್ಕೆ ಆಗತ್ತಾ?
ಸದನದ ಪಾವಿತ್ರ್ಯತೆ, ಗೋಪ್ಯತೆ ಮತ್ತು ಘನತೆಗೆ ಕುಂದು ಬರುವಂತೆ ಮಾಧ್ಯಮ ನಡೆದುಕೊಂಡರೆ ಆಗ ಸಭಾಧ್ಯಕ್ಷರು ಸಂಬಂಧಪಟ್ಟ ಪತ್ರಿಕೆ, ಟಿವಿ ಮಾಧ್ಯಮವನ್ನು ಸದನಕ್ಕೆ ಕರೆಸಿ ಛೀಮಾರಿ ಹಾಕುವುದು ಸದನದ ಸಂಪ್ರದಾಯ ಮತ್ತು ಹಕ್ಕು. ಆದರೆ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವೆ ನಡೆದ ಹಣಾಹಣಿ ಹೋರಾಟವನ್ನು ನ್ಯಾಯಪೂರ್ವಕವಾಗಿ ಟಿವಿಗಳಲ್ಲಿ ಬಿಂಬಿಸಿಲ್ಲವೆಂದು ಆರೋಪಿಸಿ ಚಾನಲ್ಲುಗಳಿಗೆ ವಿಧಾನಸಭಾ ಬುಲಾವ್ ಆಜ್ಞೆ ಹೊರಡಿಸಿರುವ ಹೇಮಚಂದ್ರ ಸಾಗರ್ ಅವರ ನಡೆಯನ್ನು ಬುಲಾವ್ ಸ್ವೀಕರಿಸಿರುವ ಚಾನಲ್ಲುಗಳು ಹೇಗೆ ಪರಿಗಣಿಸುತ್ತವೆ ಎನ್ನುವುದನ್ನು ಕಾದು ನೋಡಬೇಕಾಗಿದೆ.