ಟಿವಿ 5 ವಿರುದ್ಧ ಆಂಧ್ರದಲ್ಲಿ ಪ್ರಕರಣ ದಾಖಲು
ರಷ್ಯಾ ಮೂಲದ ವೆಬ್ ಸೈಟೊಂದು ವೈಎಸ್ ಆರ್ ಸಾವಿನ ಹಿಂದೆ ಅಂಬಾನಿಗಳ ಕೈವಾಡ ಇದೆ ಎಂಬ ಶಂಕೆಯನ್ನು ವ್ಯಕ್ತಪಡಿಸಿತ್ತು. ಇದರ ಆಧಾರವಾಗಿ ಟಿವಿ 5 ಸುದ್ದಿ ಪ್ರಸಾರ ಮಾಡಿತ್ತು. ಈ ವಿವಾದಾತ್ಮಕ ಸುದ್ದಿ ಆಂಧ್ರದಲ್ಲಿ ತೀವ್ರ ಸಂಚಲನ ಉಂಟುಮಾಡಿತ್ತು. ಸುದ್ದಿಯಿಂದ ಕೆರಳಿದ ವೈಎಸ್ ಆರ್ ಅಭಿಮಾನಿಗಳು ಆಂಧ್ರದಾದ್ಯಂತ ರಿಲಯನ್ಸ್ ಮಳಿಗೆಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಆಂಧ್ರ ಬಂದ್ ಗೆ ಕರೆಕೊಟ್ಟಿದ್ದಾರೆ.
ಐಪಿಸಿ ಸೆಕ್ಷನ್153/3A (ಪ್ರಚೋದನಕಾರಿ ಸುದ್ದಿ ಪ್ರಸಾರ ಮಾಡಿ ಗಲಭೆಗೆ ಕಾರಣವಾದ ಕಾರಣ) ಹಾಗೂ ಸೆಕ್ಷನ್ 502 A (ಮಾನಹಾನಿಗೆ ಸಂಬಂಧಪಟ್ಟಂತೆ )ಅಡಿಯಲ್ಲಿ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆ ಟಿವಿ 5 ವಿರುದ್ಧ ಪ್ರಕರಣಗಳನ್ನು ದಾಖಲಿಸಿದೆ. ಇದೇ ಸುದ್ದಿಯನ್ನು ಬಿತ್ತರಿಸಿದ ಉಳಿದ ವಾಹಿನಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಿಲಯನ್ಸ್ ಮಳಿಗೆಗಳು ಹಾಗೂ ರಿಲಯನ್ಸ್ ಗ್ರೂಪ್ ಸಂಸ್ಥೆಗಳ ಮೇಲೆ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 185 ಮಂದಿಯನ್ನು ಬಂಧಿಸಿದ್ದು ಅವರ ವಿರುದ್ಧ 96 ಕೇಸುಗಳನ್ನು ದಾಖಲಿಸಿದ್ದಾರೆ.