ಬೆಂಗಳೂರಿಗೆ ಮತ್ತೆ ಉಗ್ರರ ದಾಳಿ ಭೀತಿ?

ಭಾರತದ ವಿರುದ್ಧ ದೊಡ್ಡ ಮಟ್ಟದ ದಾಳಿ ನಡೆಸಲು ಲಷ್ಕರೆ ಉಗ್ರರು ಸಿದ್ಧತೆ ನಡೆಸಿರುವ ಸುಳಿವು ದೊರೆತಿದೆಯಾದರೂ, ಯಾವಾಗ, ಯಾವ ನಗರದ ಮೇಲೆ ದಾಳಿ ನಡೆಯಬಹುದು ಎಂಬ ಕುರಿತು ಖಚಿತ ಮಾಹಿತಿ ದೊರೆತಿಲ್ಲ. ಇದು ಭದ್ರತಾ ಇಲಾಖೆಯನ್ನು ಚಿಂತೆಗೀಡು ಮಾಡಿದ್ದು, ಸದಾ ಕಟ್ಟೆಚ್ಚರ ಕಾಯ್ದುಕೊಳ್ಳುವಂತೆ ಎಲ್ಲಾ ಮಹಾನಗರಗಳ ಪೊಲೀಸರಿಗೆ ಸೂಚಿಸಲಾಗಿದೆ. ಉಗ್ರರ ದಾಳಿಗೆ ಪ್ರತ್ಯುತ್ತರ ನೀಡಲು ಭದ್ರತಾ ಪಡೆಗಳು ಸಿದ್ಧವಾಗಿದೆಯಾದರೂ, ಅದು ದಾಳಿಯ ಪ್ರಮಾಣವನ್ನು ಅವಲಂಬಿಸಿರುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಎಫ್ಬಿಐನಿಂದ ಬಂಧನಕ್ಕೊಳಪಟ್ಟಿರುವ ಅಮೆರಿಕ ಪ್ರಜೆ ಡೇವಿಡ್ ಕೊಲೆ ಮನ್ ಹ್ಯಾಡ್ಲಿ ವಿಚಾರಣೆಯಿಂದ ಭಾರತದ ಮೇಲೆ ಬೃಹತ್ ದಾಳಿಗೆ ಸಂಚು
ನಡೆದಿರುವ ವಿಷಯ ಬೆಳಕಿಗೆ ಬಂದಿದೆ. ಆದ್ದರಿಂದ, 3 ದಿನಗಳ ಹಿಂದೆ ಕಟ್ಟೆಚ್ಚರದ ಘೋಷಣೆ ನೀಡಲಾಗಿದೆ ಎನ್ನಲಾಗಿದೆ. ಭಾರತದಿಂದ ತೆರಳಿರುವ ಅಧಿಕಾರಿಗಳ ತಂಡ ಹ್ಯಾಡ್ಲಿಯನ್ನು ವಿಚಾರಣೆಗೊಳಪಡಿಸಿದಾಗ ಲಷ್ಕರೆ ಸಂಘಟನೆ ಭಾರತದ ಮೇಲೆ ದಾಳಿಗೆ ಸಂಚು ರೂಪಿಸಿರುವ ವಿಷಯ ಬೆಳಕಿಗೆ
ಬಂದಿದೆ. ಲಷ್ಕರೆ ನಾಯಕರು ಮತ್ತು ಹ್ಯಾಡ್ಲಿ ನಡುವೆ ನಡೆದ ಇಮೇಲ್ ಸಂವಹನದಲ್ಲಿ ರಾಹುಲ್ ಎಂಬ ಹೆಸರು ಪದೇ ಪದೆ ಪ್ರಸ್ತಾಪವಾಗಿದೆ. ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿರುವ ಈ ರಾಹುಲ್ ಯಾರು ಎಂಬ ಪ್ರಶ್ನೆ ಈಗ ಭಾರತದ ಭದ್ರತಾ ವಲಯದಲ್ಲಿ ಮೂಡಿದೆ. ರಾಹುಲ್ ಯಾರು ಎಂಬ ಪ್ರಶ್ನೆಗೆ ಹ್ಯಾಡ್ಲಿ ಅವನೊಬ್ಬ ನಟ ಎಂದು ಉತ್ತರ ನೀಡಿದ್ದಾನೆ. ಹೀಗಾಗಿ ರಾಹುಲ್ ಎಂಬ ಆಗಂತುಕ ವ್ಯಕ್ತಿಗಾಗಿ ಶೋಧ ನಡೆದಿದೆ.
ಮುನ್ನೆಚ್ಚರಿಕೆ: ಗೃಹ ಸಚಿವಾಲಯ ಅತೃಪ್ತಿ
ಬೆಂಗಳೂರು ಸೇರಿದಂತೆ ದೇಶ ಮಹಾನಗರಗಳ ಮೇಲೆ ಮುಂಬಯಿ ಮಾದರಿ ದಾಳಿ ನಡೆಯುವ ಸಾಧ್ಯತೆಯಿದೆ ಎಂಬ ಗುಪ್ತಚರ ಎಚ್ಚರಿಕೆ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿದೆ. ರಕ್ಷಣಾ ಗುಪ್ತಚರ ಇಲಾಖೆ ರವಾನಿಸಿದ ಸಂದೇಶವನ್ನು ವಿಶ್ಲೇಷಿಸದೇ ಮಾಧ್ಯಮಗಳಿಗೆ ಬಿಡುಗಡೆಗೊಳಿಸಲಾಗಿದೆ ಗೃಹ ಸಚಿವಾಲಯ ತಿಳಿಸಿದೆ.
ನೌಕಾಪಡೆಯ ಗುಪ್ತಚರ ಇಲಾಖೆ ಉಗ್ರರ ನಡುವೆ ನಡೆದ ಕೆಲವು ಸಂಭಾಷಣೆಯನ್ನು ಕದ್ದಾಲಿಸಿ ಸಂಭಾವ್ಯ ದಾಳಿಯ ಬಗ್ಗೆ ಸಂಬಂಧಪಟ್ಟ ಇಲಾಖೆಗಳನ್ನು ಎಚ್ಚರಿಸಿತ್ತು. ಇದನ್ನು ಸರಿಯಾಗಿ ವಿಶ್ಲೇಷಿಸದೇ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ. ಗಾಬರಿಗೊಳ್ಳುವಂತಹ ಸನ್ನಿವೇಶವೇನೂ ನಿರ್ಮಾಣವಾಗಿಲ್ಲ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
(ಸ್ನೇಹಸೇತು:ವಿಕ ಸುದ್ದಿ ಲೋಕ)












Click it and Unblock the Notifications