ರಾಜಾಜಿನಗರ ಕಾರಿಡಾರ್ ಗೆ ಭೂಮಿಪೂಜೆ
ರಾಜಾಜಿನಗರ ಕಾರಿಡಾರ್ ಕಾಮಗಾರಿಯ ಭೂಮಿಪೂಜೆ ನಡೆಸಿ, ನಂತರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು. ಓಕಳಿಪುರಂ ಜಂಕ್ಷನ್ನಲ್ಲಿ ನಿರ್ಮಾಣವಾಗುತ್ತಿರುವ ಅಂಡರ್ ಪಾಸ್ಗೆ 10.52 ಕೋಟಿ ರೂ.ವೆಚ್ಚವಾಗಲಿದೆ. ಅನೇಕ ತಿಂಗಳ ಕಾಲ ಅನೇಕ ತಜ್ಞರ ಜೊತೆ ನಡೆಸಿದ ಸಮಾಲೋಚನೆಯ ನಂತರ ಈ ಕಾರಿಡಾರ್ ನ ನೀಲನಕ್ಷೆ ಸಿದ್ಧವಾಗಿದೆ. ಈ ಯೋಜನೆಯಡಿ ಮೊದಲ ಹಂತದಲ್ಲಿ ಡಾ ರಾಜ್ಕುಮಾರ್ ರಸ್ತೆ ಒಳಗೊಂಡಂತೆ ಯಶವಂತಪುರದಿಂದ ಓಕಳಿಪುರಂ ಜಂಕ್ಷನ್ವರೆಗೆ ಸಿಗ್ನಲ್ ರಹಿತ ಸಂಚಾರ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದರು.
ಇದಕ್ಕಾಗಿ ವಿವೇಕಾನಂದ ಕಾಲೇಜ್ ಜಂಕ್ಷನ್, 10ನೇ ಅಡ್ಡರಸ್ತೆ ಜಂಕ್ಷನ್, ನವರಂಗ್ ಜಂಕ್ಷನ್, ಬ್ರಿಡ್ಜ್ ಸ್ಟೋನ್ ಜಂಕ್ಷನ್, 3ನೇ ಬ್ಲಾಕ್ ಜಂಕ್ಷನ್, ಓಕಳಿಪುರಂ ಜಂಕ್ಷನ್ ಮುಂತಾದ 6 ಕಡೆಗಳಲ್ಲಿ ಅಂಡರ್ ಪಾಸ್ಗಳನ್ನು ನಿರ್ಮಾಣ ಮಾಡಲು ಯೋಜನೆ ಸಿದ್ಧವಾಗಿದೆ ಎಂದು ಸಚಿವ ಸುರೇಶ್ಕುಮಾರ್ ಹೇಳಿದರು.
ಈ ಯೋಜನೆಯ ಒಟ್ಟು ಅಂದಾಜು ಮೊತ್ತ 125 ಕೋಟಿ ರೂಪಾಯಿಗಳಾಗಿವೆ. ಈ 6 ಜಂಕ್ಷನ್ಗಳಲ್ಲಿ ಮೊದಲ ಹಂತದಲ್ಲಿ ವಿವೇಕಾನಂದ ಕಾಲೇಜ್ ಜಂಕ್ಷನ್, 10ನೇ ಅಡ್ಡರಸ್ತೆ ಹಾಗೂ ಓಕಳಿಪುರಂ ಜಂಕ್ಷನ್ಗಳಲ್ಲಿ 3 ಅಂಡರ್ಪಾಸ್ಗಳನ್ನು ನಿರ್ಮಿಸಲಾಗುತ್ತದೆ. ವಿವೇಕಾನಂದ ಕಾಲೇಜ್ ಜಂಕ್ಷನ್ ಅಂಡರ್ಪಾಸ್ ನಿರ್ಮಾಣಕ್ಕೆ 7.71 ಕೋಟಿ ರುಪಾಯಿ, 10ನೇ ಅಡ್ಡರಸ್ತೆ ಅಂಡರ್ ಪಾಸ್ಗೆ 1346,50 ಲಕ್ಷ ಹಾಗೂ ಓಕಳಿಪುರಂ ಜಂಕ್ಷನ್ನ ಅಂಡರ್ಪಾಸ್ಗೆ 1052.40 ಲಕ್ಷ ವೆಚ್ಚ ಅಂದಾಜು ಮಾಡಲಾಗಿದೆ. ಉಳಿದ 3 ಅಂಡರ್ಪಾಸ್ಗಳನ್ನು ಎರಡನೇ ಹಂತದಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈ ಯೋಜನೆಗಾಗಿ ತಮಗೆ ಸೇರಿದ 3.5 ಎಕರೆ ಭೂಮಿಯನ್ನು ಬಿಟ್ಟುಕೊಟ್ಟಿದ್ದಾರೆ. ಜನೋಪಯೋಗಿ ಕೆಲಸಗಳಲ್ಲಿ ಹೀಗೆ ಪಕ್ಷಭೇದ ಮರೆತು ಸಹಕಾರ ನೀಡಿದಾಗ ಪ್ರಗತಿ ಸಾಧ್ಯ. ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಸಚಿವ ಸುರೇಶ್ಕುಮಾರ್ ಹೇಳಿದರು.
ಪ್ರಯಾಣಕರಿಗೆ ಪರ್ಯಾಯ ಮಾರ್ಗ : ಈ ಕಾರಿಡಾರ್ ನಿರ್ಮಾಣ ಸಮಯದಲ್ಲಿ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ಪರ್ಯಾಯ ಮಾರ್ಗಗಳನ್ನು ಈಗಾಗಲೇ ಯೋಜಿಸಲಾಗಿದೆ. ಮಾಗಡಿ ರಸ್ತೆಯಿಂದ ರಾಜಾಜಿನಗರಕ್ಕೆ ನೇರವಾದ ಪರ್ಯಾಯ ಮಾರ್ಗ ನಿರ್ಮಿಸಲಾಗುವುದು, ಅದರ ವಿವರಗಳನ್ನು ಬಿ.ಬಿ.ಎಂ.ಪಿ ಪ್ರಕಟಿಸಲಿದೆ ಎಂದು ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)