ಶಿಕಾರಿಪುರದಲ್ಲಿ ಸಿಎಂರಿಂದ ರಂಜಾನ್ ಪ್ರಾರ್ಥನೆ

"ಹಿಂದೂ ಮುಸಲ್ಮಾನರು ಪರಸ್ಪರ ಸಹೋದರತ್ವದಿಂದ ಬಾಳಬೇಕು. ಆಗಷ್ಟೇ, ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ.ಅಲ್ಪಸಂಖ್ಯಾತರ ಏಳಿಗೆಗೆ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಪಟ್ಟಣದಲ್ಲಿ ಶಾದಿ ಮಹಲ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು" ಎಂದು ಯಡಿಯೂರಪ್ಪ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಶಿಕಾರಿಪುರ ಜಿಲ್ಲೆ ಇಲ್ಲ:
ಶಿಕಾರಿಪುರ ಜಿಲ್ಲೆ ರಚನೆ ಸಾಧ್ಯತೆಯನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಳ್ಳಿಹಾಕಿದ್ದಾರೆ. ಈ ಬಗ್ಗೆ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಪಟ್ಟಣದಲ್ಲಿ ಮೂಲಭೂತ ಸೌಕರ್ಯ ಹೆಚ್ಚಳಕ್ಕೆ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.ಜಿಲ್ಲಾ ಕೇಂದ್ರದ ಮಾದರಿಯಲ್ಲೇ ಎಲ್ಲಾ ಸೌಲಭ್ಯಗಳು ಲಭ್ಯವಾಗಲಿದೆ ಎಂದರು . ಇತ್ತೀಚೆಗೆ ಸಿಎಂ ಅವರ ಮಗ ಬಿವೈ ರಾಘವೇಂದ್ರ ಶಿಕಾರಿಪುರ ಜಿಲ್ಲೆ ಆಗುವುದು ಎಂಬ ಸೂಚನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಬಿಜೆಪಿ ಹಾಗೂ ಕಾಂಗ್ರೆಸ್ ಒಳಒಪ್ಪಂದ ಮಾಡಿಕೊಂಡಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ಈ ಬಗ್ಗೆ ಜನತೆಯೇ ಉತ್ತರ ನೀಡುತ್ತಾರೆ. ಆಡಳಿತ ಪಕ್ಷವನ್ನು ಸುಖಾ ಸುಮ್ಮನೆ ಟೀಕಿಸುವುದು ಅವರ ಜಾಯಮಾನ. ಇದ್ಯಾವುದಕ್ಕೂ ಗಮನಕೊಡದೆ ಅಭಿವೃದ್ಧಿ ಕಾರ್ಯಕ್ರಮದಲ್ಲಿ ತೊಡಗುವುದಾಗಿ ಯಡಿಯೂರಪ್ಪ ಹೇಳಿದರು.
ಈದ್ -ಶಾಂತಿ ಸಮಬಾಳ್ವೆಯ ಸಂಕೇತ
ಮುಸ್ಲಿಮರು 9ನೇ ತಿಂಗಳು ಪೂರ್ತಿ ಉಪವಾಸ ಮಾಡಿ ಕುರಾನ್ ಮತ್ತು ಅಲ್ಲಾಹುವಿನ ಉಪಾಸನೆ ಮಾಡಲು ಸಮಯ ವಿನಿಯೋಗಿಸುತ್ತಾರೆ. ಕುಡಿತ, ಧೂಮಪಾನ ಮತ್ತು ಲೈಂಗಿಕ ಕ್ರಿಯೆಗಳಿಂದ ದೂರವಿರುವ ಅಲ್ಲಾಹುವಿನ ಭಕ್ತರುಗಳಿಗೆ ಈ ತಿಂಗಳಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆಯಿದೆ. ಪವಿತ್ರ ಗ್ರಂಥವಾದ ಕುರಾನ್ ಅನ್ನು ದೇವರು ಪ್ರವಾದಿ ಮೊಹಮ್ಮದನಿಗೆ ರಂಜಾನ್ ತಿಂಗಳಲ್ಲಿ ಬೋಧಿಸಿದನೆಂಬ ನಂಬಿಕೆಯೂ ಇದೆ.
ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳು ಇಂದು ಕಾರ್ಯ ನಿರ್ವಹಿಸುತ್ತಿಲ್ಲ. ಈ ಮಧ್ಯೆ ತುಮಕೂರು ಮತ್ತು ಕೋಲಾರದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಹೆಜ್ಜೇನುಗಳು ದಾಳಿ ನಡೆಸಿರುವ ಘಟನೆ ವರದಿಯಾಗಿದೆ. ಕೋಲಾರದ ವೀರಾಪುರ ಮತ್ತು ತುಮಕೂರಿನ ಜಿ ಎಚ್ ರಿಸಾಲದಲ್ಲಿ ಈ ಘಟನೆ ನಡೆದಿದ್ದು, ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.
(ದಟ್ಸ್ ಕನ್ನಡವಾರ್ತೆ)












Click it and Unblock the Notifications