ಕಂಟೋನ್ಮೆಂಟಿನಲ್ಲಿ ಕನ್ನಡ ಡಿಂಡಿಮ!
ಅಂದು ಬೆಳಿಗ್ಗೆ 9.30ಗಂಟೆಗೆ ವಸಂತನಗರ ವೃತ್ತದಲ್ಲಿ ನೂತನ ಒಕ್ಕೂಟದ ಧ್ವಜ ಸ್ತಂಭವನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಮುಜರಾಯಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಎನ್. ಕೃಷ್ಣಯ್ಯ ಶೆಟ್ಟಿ ಅವರು ನೆರವೇರಿಸುವರು. ಅಪರಾಹ್ನ 2.30ಕ್ಕೆ ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳು ನಗರದ ವಿವಿಧ ಕನ್ನಡ ಪರ ಸಂಘಟನೆಗಳು ಭಾಗವಹಿಸಲಿದ್ದು ಕಾಚರಕನಹಳ್ಳಿ, ಆರ್.ಟಿ. ನಗರ, ಶಿವಾಜಿನಗರ ಪ್ರದೇಶಗಳಿಂದ ಮೆರವಣಿಗೆ ಹೊರಟು ಅಂಬೇಡ್ಕರ್ ಭವನ ತಲುಪಲಿವೆ.
ಸಂಜೆ 4.30 ಸುಮಾರಿಗೆ ಸಮ್ಮೇಳನವನ್ನು ಹಿರಿಯ ಸಂಶೋಧಕ ಡಾ.ಎಂ. ಚಿದಾನಂದ ಮೂರ್ತಿ ಉದ್ಘಾಟಿಸಲಿದ್ದಾರೆ.ಅಬಕಾರಿ ಮತ್ತು ವಾರ್ತಾ ಸಚಿವ ಕಟ್ಟಾಸುಬ್ರಮಣ್ಯನಾಯ್ಡು ಅವರು "ದಂಡು ಡಿಂಡಿಮ" ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಅವರು "ಕನ್ನಡ ಕಹಳೆ" ಕವಿತಾ ಸಂಕಲನವನ್ನು ಬಿಡುಗಡೆ ಮಾಡಲಿದ್ದಾರೆ. ಸಂಜೆ 5.30ಗೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಕಾರ್ಯದರ್ಶಿ ಬಿ.ಆರ್. ಜಯರಾಮರಾಜೇ ಅರಸ್ ಅವರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮಾಡಲಿದ್ದಾರೆ.
ಕನ್ನಡಕ್ಕೋಸ್ಕರ ನಾನಾ ಊರು, ಕೇರಿ, ತಾಲೂಕು, ಜಿಲ್ಲೆ, ದೇಶವಿದೇಶಗಳಲ್ಲಿ ಸಮ್ಮಳನಗಳು ನಡೆಯುವುದು ರೂಢಿ. ಆದರೆ, ಬೆಂಗಳೂರಿನಂಥ ನಗರದ ಒಂದು ಬಡಾವಣೆಯಲ್ಲಿ ಕನ್ನಡ ಸಮ್ಮೇಳನ ನಡೆಯುತ್ತಿದೆ ಎಂದರೆ ಬೆರಳು ಮೂಗಿನ ತುದಿಗೆ ಹೋಗುತ್ತದೆ. ವಿಶೇಷವಾಗಿ ಎಲ್ಲಿ ಕನ್ನಡ ಕಾಣೆಯಾಗಿದೆಯೋ ಅಲ್ಲಿ ಕನ್ನಡತನವನ್ನು ಪ್ರತಿಷ್ಠಾಪಿಸುವ ಕೈಕಂಕರ್ಯಕ್ಕೆ ಸ್ಥಳೀಯರು ಮುಂದಾಗಿರುವ ಸಂಗತಿ ಗೋಚರಿಸುತ್ತಿದೆ. ಗಾಂಧೀಬಜಾರ್, ಚಾಮರಾಜಪೇಟೆ, ಗವೀಪುರಂ, ಮಲ್ಲೇಶ್ವರ,ಜಯನಗರ ಮುಂತಾದ ಕನ್ನಡದಟ್ಟಣೆಯ ಪ್ರದೇಶದ ಹುಡುಗರು ಜಾಸ್ತಿ ಇಂಗ್ಲಿಷ್ ಮಾತಾಡುವ ಡಿಂಗೋ ಜಾತಿಯ ಹುಡುಗ, ಹುಡುಗಿಯರಿಗೆ ಕಂಟ್ರಮೆಂಟ್ ಎಂದು ಕರೆಯುತ್ತಾರೆ. ಇಂಥ ಕಂಟೋನ್ ಮೆಂಟ್ ಪ್ರದೇಶದಲ್ಲಿ ಕನ್ನಡ ಸಮ್ಮೇಳನ ವ್ಯವಸ್ಥೆಯಾಗಿರುವುದು ಬಾಡುವ ಕನ್ನಡ ಗಿಡಕ್ಕೆ ಸಗಣಿಗೊಬ್ಬರ ಸಿಂಪಡಿಸುವ ಪ್ರಯತ್ನವೆಂದು ತೋರುತ್ತದೆ.
ಅಂತೆಯೇ, ಬೆಳಗಾವಿ ಮತ್ತಿತರ ಪ್ರದೇಶಗಳಲ್ಲೂ ಕಂಟೋನ್ಮೆಂಟ್ ಗಳಿವೆ. ಅಷ್ಟು ದೂರ ಯಾಕೆ, ಇಂದಿರಾನಗರ ಮಾರತ್ ಹಳ್ಳಿ ಇಲೆಕ್ಟ್ರಾನಿಕ್ ಸಿಟಿ ಮತ್ತು ನಾವು ಕಂಡುಕೇಳರಿಯದ ಬೆಂಗಳೂರಿನ ಹೊಸಹೊಸಹೊಸ ಬಡಾವಣೆಗಳಲ್ಲಿ ಇಂಥ ಕನ್ನಡ ಪ್ರಜ್ಞೆಯ ಬೀಜಗಳನ್ನು ಆಗಾಗ ಬಿತ್ತುತ್ತಿದ್ದರೆ ಒಳಿತು. ಸಮ್ಮೇಳನ ಒಂದು ನೆಪ ಅಷ್ಟೆ.
(ದಟ್ಸ್ ಕನ್ನಡ ವಾರ್ತೆ)