ಹಂದಿಜ್ವರಕ್ಕೆ ಬೆಂಗಳೂರಿನಲ್ಲಿ ಮತ್ತೆ ಮೂರು ಬಲಿ
ಸಿದ್ದರಾಜು(28), ಸರೋಜಮ್ಮ (52), ಶಿವು(22) ಸೋಮವಾರ ಎಚ್1ಎನ್1ಗೆ ಬಲಿಯಾದವರು.ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಇವರೆಲ್ಲಾ ಮೃತಪಟ್ಟಿರುವುದಾಗಿ ಆರೋಗ್ಯ ಮತ್ತು ಕುಟುಂಗ ಕಲ್ಯಾಣ ಇಲಾಖೆಯ ಮೂಲಗಳು ದೃಢಪಡಿಸಿವೆ. ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧೆಡೆ 15 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ.
ಬೆಂಗಳೂರು ಮಂಜುನಾಥ ನಗರದ ಸರೋಜಮ್ಮ ಸೋಮವಾರ ರಾತ್ರಿ ಕಾಮಾಕ್ಷಿಪಾಳ್ಯದ ತಿರುಮಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಉಸಿರಾಟದ ತೋಂದರೆಯಿಂದ ಅವರು ಆ.17ರಂದು ಆಸ್ಪ್ತತ್ರೆಗೆ ದಾಖಲಾಗಿದ್ದರು. ನಿಮ್ಹಾನ್ಸ್ ನಿಂದ ಬಂದ ವರದಿ ಇವರಿಗೆ ಎಚ್1ಎನ್1 ಇರುವುದು ದೃಢಪಡಿಸಿತ್ತು.
ಜ್ವರದಿಂದ ಬಳಲುತ್ತಿದ್ದ ಬೆಂಗಳೂರಿನ ಚೋಳನಾಯಕನ ಹಳ್ಳಿಯ ಸಿದ್ದರಾಜು ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದರು. ಅಲ್ಲಿನ ವೈದ್ಯರು ಜ್ವರವಿಲ್ಲ ಎಂದು ತಿಳಿಸಿದ್ದ್ದರು. ಜ್ವರ ಜಾಸ್ತಿಯಾಗಿ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿಕೊಂಡಿದ್ದರು. ಆ.21ರಂದು ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಇವರು ಎಚ್1ಎನ್1ನಿಂದ ಮೃತಪಟ್ಟಿರುವುದಾಗಿ ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆ ದೃಢಪಡಿಸಿದೆ.
ಕೋಲಾರ ಜಿಲ್ಲೆಯ ಕದಗ ಹಳ್ಳಿಯ ಶಿವು ಅವರು ನಿನ್ನೆ ರಾತ್ರಿ ನಿಧನರಾಗಿದ್ದಾರೆ. ನಿಮ್ಹಾನ್ಸ್ ನ ಪರೀಕ್ಷೆಯ ವರದಿ ಅವರಿಗೆ ಎಚ್1ಎನ್1 ಇತ್ತು ಎಂಬುದನ್ನು ಸ್ಪಷ್ಟಪಡಿಸಿದೆ. ಎಚ್1ಎನ್1ನ ಮತ್ತಷ್ಟು ಪ್ರಕರಣಗಳು ಪತ್ತೆಯಾಗುತ್ತಿದ್ದು ರಾಜ್ಯದಲ್ಲಿ ರೋಗಿಗಳ ಸಂಖ್ಯೆ ಒಟ್ಟು 324ಕ್ಕೆ ಏರಿಕೆಯಾಗಿದೆ.
(ದಟ್ಸ್ ಕನ್ನಡ ವಾರ್ತೆ)