ದೆಹಲಿ ಕರ್ನಾಟಕಭವನಕ್ಕೆ ವೈ.ಸಿ.ಶಿವಕುಮಾರ್
ಎರೆಸೀಮೆ ಚನ್ನಪ್ಪ ಶಿವಕುಮಾರ್ ಅವರು ಮೂಲತಃ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹಾರಾವಿ ಗ್ರಾಮದವರು. ತಮ್ಮ ಪ್ರಾಥಮಿಕದಿಂದ ಶಿಕ್ಷಣದಿಂದ ಸ್ನಾತಕೋತ್ತರ ವರೆಗಿನ ಶಿಕ್ಷಣವನ್ನು ಬೆಂಗಳೂರಿನಲ್ಲಿಯೇ ಪೂರೈಸಿ, 1977ರಲ್ಲಿ ಕರ್ನಾಟಕ ಸಚಿವಾಲಯ ಸೇವೆಗೆ ಸೇರಿದರು. ಅಲ್ಲಿಂದ 1991ರಲ್ಲಿ ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಗೆ ಸಹಾಯಕ ಆಯಕ್ತರಾಗಿ ನೇಮಕಗೊಂಡರು.
ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಉಪ ಆಯುಕ್ತರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಕುಮಾರ್ ಅವರು ಇದೀಗ ದೆಹಲಿಯಲ್ಲಿ ರಾಜ್ಯ ಸರ್ಕಾರದ ಅತ್ಯಂತ ಪ್ರಮುಖ ಸಂಸ್ಥೆ ಎನಿಸಿದ ಕರ್ನಾಟಕ ಭವನದ ಉಪ ನಿವಾಸಿ ಆಯುಕ್ತರ ಹುದ್ದೆಯನ್ನು ಅಲಂಕರಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಭೆ ನಡೆಸಿ, ಕಾರ್ಯಕಲಾಪಗಳ ಮಾಹಿತಿ ಪಡೆದರು. ಸಾಹಿತ್ಯ, ಕಲೆ ಮತ್ತು ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಮಂಜೇಶ್ ಅವರಂತೆ ಕರ್ನಾಟಕದ ಕಲೆ, ಸಂಗೀತ ಮತ್ತು ಸಾಹಿತ್ಯದ ಪರಿಚಾರಕವಾಗಿ ದೆಹಲಿಯಲ್ಲಿ ಕೆಲಸ ಮಾಡುವ ಭರವಸೆ ನೀಡಿದ್ದಾರೆ. ದೆಹಲಿಯಲ್ಲಿ ಕರ್ನಾಟಕದ ಹಿತಾಸಕ್ತಿಗಳನ್ನು ರಕ್ಷಿಸುವ ಮತ್ತು ಕರ್ನಾಟಕ ನಾಡು, ನುಡಿ, ಭಾಷೆ, ಗಡಿ, ಸಂಸ್ಕೃತಿಗಳ ಮಹತ್ವ ಸಾರುವ ಉತ್ತಮ ಕೆಲಸ ಮಾಡುತ್ತಿದ್ದ ಮಂಜೇಶ್ ಅವರು ಇದೀಗ ಮರಳಿ ತಾಯಿ ನಾಡಿಗೆ ಹೋಗುತ್ತಿದ್ದಾರೆ.
(ದಟ್ಸ್ ಕನ್ನಡವಾರ್ತೆ)