ಪಂಚಮಿಯಂದು ಭಕ್ತರಿದ್ದಲ್ಲೇ ಬಂದ ನಾಗಪ್ಪ!
ಭಾನುವಾರ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮಡಿಸೀರೆಯುಟ್ಟ ಹೆಂಗಳೆಯರೆಲ್ಲ ನಾಗರ ಕಲ್ಲಿಗೆ ಹಾಲೆರೆದು ಹುತ್ತವನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸುತ್ತಿದ್ದ ಸಂದರ್ಭದಲ್ಲಿ ನಾಗರಹಾವು ಆಕಸ್ಮಿಕವಾಗಿಯೇ ಅಲ್ಲಿಗೆ ಆಗಮಿಸಿದೆ. ಸಹಜವೆಂಬಂತೆ, ಭಕ್ತಗಣ ಇದರಿಂದ ವಿಚಲಿತರಾದರೂ ಈ ವಿಸ್ಮಯಕ್ಕೆ ಬೆರಗಾಗಿ ನಿಂತಲ್ಲಿಂದಲೇ ನಾಗಪ್ಪನಿಗೆ ನಮಿಸಿದರು.
ಹಾವು ಕೂಡ ಗಲಿಬಿಲಿಯಾಗದೇ ಆಶ್ಚರ್ಯವೆಂಬಂತೆ ಸ್ಥಳದಲ್ಲಿಯೇ ಹೆಡೆಯೆತ್ತಿ ಕುಳಿತು ಜನರ ನಮನವನ್ನು ಸ್ವೀಕರಿಸಿದೆ. ದೇವಸ್ಥಾನದ ಪೂಜಾರಿ ಕೂಡ ನಾಗಪ್ಪನಿಗೆ ಮಂಗಳಾರತಿ ಬೆಳಗಿದರು.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೂಡಲೇ ಆಗಮಿಸಿದ ಸ್ನೇಕ್ ಕಿರಣ್, ನಿಜವಾದ ಹಾವಿಗೆ ಹಾಲೆರೆಯದಂತೆ ಎಚ್ಚರಿಕೆ ನೀಡಿದರು. ನಾಗರಹಾವು ಹಾಲನ್ನು ಕುಡಿಯುವುದಿಲ್ಲ. ಹಾಲೆರೆದು ಅದರ ಮೇಲೆ ಅಂಟುಅಂಟಾದರೆ ಇರುವೆಗಳೆಲ್ಲ ಮುಕ್ಕರುತ್ತವೆ. ಇದರಿಂದ ಹಾವಿನ ಜೀವಕ್ಕೇ ಅಪಾಯ ಎಂದು ತಿಳಿವಳಿಕೆ ನೀಡಿದರು. ನಂತರ ಅತ್ಯಂತ ಜಾಗರೂಕತೆಯಿಂದ ಹಾವನ್ನು ಹಿಡಿದ ಕಿರಣ್ ಅದನ್ನು ಸುರಕ್ಷಿತ ಜಾಗಕ್ಕೆ ಬಿಟ್ಟು ಬಂದರು.