ಮೊಯ್ಲಿ, ಮುನಿಯಪ್ಪ ವಿರುದ್ಧ ಸಿಡಿದೆದ್ದ ಕರವೇ
ಬೆಂಗಳೂರು, ಜೂ.2: ಆಂಗ್ಲ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ ಮತ್ತು ಕೆ ಎಚ್ ಮುನಿಯಪ್ಪ ವಿರುದ್ಧ ಕನ್ನಡ ರಕ್ಷಣಾ ವೇದಿಕೆ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ರಾಜ್ಯದಿಂದ ಆಯ್ಕೆಯಾದ ಸಂಸದರು ಮೊದಲ ಬಾರಿಗೆ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.ಆದರೆ ಮೊಯ್ಲಿ ಮತ್ತು ಮುನಿಯಪ್ಪ ಕನ್ನಡಕ್ಕೆ ದ್ರೋಹ ಮಾಡಿದ್ದಾರೆ. ಈ ಇಬ್ಬರು ಸಚಿವರನ್ನು ರಾಜ್ಯದ ಜನತೆ ಕ್ಷಮಿಸುವುದಿಲ್ಲ, ಇವರು ಭಾಗವಹಿಸುವ ಎಲ್ಲಾ ಸಭೆ - ಸಮಾರಂಭಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸಲಿದ್ದೇವೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣ ಗೌಡ ಎಚ್ಚರಿಸಿದ್ದಾರೆ.
ರಾಜ್ಯದ ಅಭಿವೃದ್ಧಿ ಹಾಗೂ ಕೇಂದ್ರದಿಂದ ನ್ಯಾಯಯುತವಾಗಿ ಸಲ್ಲಬೇಕಿದ್ದ ಸೌಲಭ್ಯ ದೊರಕಿಸಿಕೊಡಲು ಎಲ್ಲಾ ಸಂಸದರು ಪಕ್ಷಭೇದ ಮರೆತು ಒಂದಾಗಬೇಕು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿಸಲು ಅಡ್ಡಿಯಾಗಿರುವ ತಮಿಳುನಾಡಿನ ಆರ್ ಗಾಂಧಿಯವರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಾಪಾಸ್ ತೆಗೆಸಲು ಶ್ರಮಿಸಬೇಕೆಂದು ನಾರಾಯಣಗೌಡ ಆಗ್ರಹಿಸಿದ್ದಾರೆ.
ರಾಜ್ಯದ ಇಬ್ಬರು ಸಚಿವರು ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಆಂಗ್ಲ ಭಾಷಾ ವ್ಯಾಮೋಹ ಪ್ರಕಟಿಸಿರುವುದು ವಿಷಾದನೀಯ ಸಂಗತಿ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಖೇದ ವಕ್ತಪಡಿಸಿದ್ದಾರೆ. ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ಎಲ್ಲಾ ಸಂಸದರಿಗೆ ಕರವೇ ಮತ್ತು ಕನ್ನಡ ಅಭಿವೃದ್ದಿ ಪ್ರಾಧಿಕಾರ ಅಭಿನಂದನೆ ಸಲ್ಲಿಸಿದೆ.
(ದಟ್ಸ್ ಕನ್ನಡ ವಾರ್ತೆ)