ಕರ್ನಾಟಕ ನಕ್ಸಲ್ ಮುಖ್ಯಸ್ಥ ರೆಡ್ಡಿ ಎನ್ ಕೌಂಟರ್
ಆಂಧ್ರದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಕೊಲೆ ಯತ್ನ ಸೇರಿದಂತೆ ಹಲವಾರು ನಾಯಕರ ಕೊಲೆ ಪ್ರಕರಣಗಳಲ್ಲಿ ಸುಧಾಕರ ರೆಡ್ಡಿ ಭಾಗಿಯಾಗಿದ್ದ. ಖಚಿತ ಸುಳಿವಿನ ಮೇರೆಗೆ ಭಾನುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ವಾರಂಗಲ್ ಜಿಲ್ಲೆಯ ಲವೆಲ್ಲಾ ಅರಣ್ಯ ಪ್ರದೇಶದಲ್ಲಿ ಶೋಧಕಾರ್ಯ ಆರಂಭಿಸಿದ ಪೊಲೀಸರಿಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆಯಿತು. ಪೊಲೀಸರ ಗುಂಡಿಗೆ ರೆಡ್ಡಿ ಹಾಗೂ ಆತನ ಸಹಚರ ವೆಂಕಟಯ್ಯ(29)ಮೃತಪಟ್ಟರು ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ವಿ ಸಿ ಸಜ್ಜನಾರ್ ತಿಳಿಸಿದ್ದಾರೆ.
2000ದಲ್ಲಿ ಆಂಧ್ರದ ಗೃಹ ಸಚಿವ ಎ ಮಾಧವರೆಡ್ಡಿ ಅವರನ್ನು ಹತ್ಯೆಗೈದಿದ್ದ ಸುಧಾಕರರೆಡ್ಡಿ ನಕ್ಸಲ್ ವಲಯದಲ್ಲಿ 'ಲ್ಯಾಪ್ ಟಾಪ್ ಮನುಷ್ಯ' ಎಂದೇ ಕರೆಸಿಕೊಳ್ಳುತ್ತಿದ್ದ. ತನ್ನ ಪ್ರತಿದಾಳಿಗೂ ಈತ ಲ್ಯಾಪ್ ಟಾಪ್ ನಲ್ಲೇ ಯೋಜನೆ ರೂಪಿಸುತ್ತಿದ್ದ. ಎಕೆ 47 ಗನ್ ಬಳಕೆ, ಗೆರಿಲ್ಲಾ ಯುದ್ಧ ತಂತ್ರ ಸೇರಿದಂತೆ ನೆಲಬಾಂಬ್ ಸ್ಫೋಟದ ತಂತ್ರದಲ್ಲಿ ರೆಡ್ಡಿ ನಿಷ್ಣಾತನಾಗಿದ್ದ. ರೆಡ್ಡಿ ತಲೆಗೆ ಆಂಧ್ರದಲ್ಲಿ 12 ಲಕ್ಷ ರು.ಗಳ ಬಹುಮಾನ ಘೋಷಿಸಲಾಗಿತ್ತು.
ಸುಧಾಕರ ರೆಡ್ಡಿ ಹುಟ್ಟಿದ್ದು ಅಂಧ್ರದ ಕುರ್ತಿರಾವ್ ಚೆರವಿನಲ್ಲಿ. ಉಸ್ಮಾಮಾನಿಯಾ ವಿಶ್ವವಿದ್ಯಾಲಯದ ಪದವೀಧರ. ವಿದ್ಯಾರ್ಥಿ ನಾಯಕನಾಗಿದ್ದ ರೆಡ್ಡಿ 80ರ ದಶಕದಲ್ಲೇ ನಕ್ಸಲ್ ಚಳುವಳಿಗೆ ಧುಮುಕಿದ್ದ. 2005ರಲ್ಲಿ ಸಾಕೇತ್ ರಾಜನ್ ಹತ್ಯೆಯಾದ ಬಳಿಕ ಕರ್ನಾಟಕ ನಕ್ಸಲ್ ಚಟುವಟಿಕೆಗಳನ್ನು ರೆಡ್ಡಿ ನಿಯಂತ್ರಿಸುತ್ತಿದ್ದ. ಶಿವಮೊಗ್ಗ, ಚಿಕ್ಕಮಗಳೂರು ಸುತ್ತಮುತ್ತ ಕಾರ್ಯಾಚರಣೆ ನಡೆಸುತ್ತಿದ್ದ.
(ಏಜೆನ್ಸೀಸ್)