ತಮಿಳರಿಗೆ ಸೂಕ್ತ ರಕ್ಷಣೆ ನೀಡುತ್ತೇವೆ : ರಾಜಪಕ್ಷ್ಸೆ
ಕೊಲಂಬೋ, ಮೇ. 19 : ಸಿಂಹಳಿಯರ ಮಾತೃನೆಲ ಶ್ರೀಲಂಕಾ ಇದೀಗ ಉಗ್ರರಿಂದ ಮುಕ್ತವಾಗಿದೆ. ಇದು ಶ್ರೀಲಂಕಾ ದೇಶ ಹೆಮ್ಮಪಡುವಂತ ಸಾಧನೆಯಾಗಿದೆ. ಕಳೆದು ಮೂರು ದಶಕಗಳಿಂದ ಲಂಕಾ ಸರಕಾರಕ್ಕೆ ಸಿಂಹಸ್ವಪ್ನವಾಗಿದ್ದ ಉಗ್ರ ಸಂಘಟನೆ ಲಿಬಿರೇಶನ್ ಟೈಗರ್ಸ್ ಆಫ್ ತಮಿಳು ಈಳಂ (ಎಲ್ ಟಿಟಿಇ)ಮುಖ್ಯಸ್ಥ ಪ್ರಭಾಕರನ್ ಅವರನ್ನು ಹತ್ಯೆ ಮಾಡಲಾಗಿದೆ. ಎಲ್ ಟಿಟಿಇ ವಶದಲ್ಲಿದ್ದ ಎಲ್ಲ ಪ್ರದೇಶವನ್ನು ಲಂಕಾ ಸೇನೆ ವಶಪಡಿಸಿಕೊಂಡಿದೆ. ಇದು ಲಂಕನ್ನರಿಗೆ ನಿಜವಾದ ಸ್ವಾತಂತ್ರ ಎಂದು ಸಂಸತ್ ನಲ್ಲಿ ರಾಷ್ಟ್ರವನ್ನುದ್ದೇಶಿಸಿ ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಷ್ಸೆ ಭಾಷಣ ಮಾಡಿದರು.
ಉಗ್ರ ಸಂಘಟನೆ ಎಲ್ ಟಿಟಿಇ ಶ್ರೀಲಂಕಾ ಸರಕಾರಕ್ಕೆ ತುಂಬಾ ತಲೆನೋವಾಗಿ ಪರಿಣಮಿಸಿತ್ತು. 30 ವರ್ಷಗಳಿಂದ ಎಲ್ ಟಿಟಿಇಯಿಂದ ಶ್ರೀಲಂಕಾಕ್ಕೆ ಭಾರಿ ನಷ್ಟವಾಗಿತ್ತು. ಭಾರತದ ಮಾಜಿ ಪ್ರಧಾನಿ ರಾಜೀವ ಗಾಂಧಿ, ಲಂಕಾ ಸಚಿವ ಕಾದಿರ್ ಗಮಾರ್, ಪ್ರಧಾನಿ ಪ್ರೇಮದಾಸ್ ಸೇರಿದಂತೆ ಅನೇಕ ನೇತಾರರನ್ನು ಎಲ್ ಟಿಟಿಇ ಬಲಿತೆಗೆದುಕೊಂಡಿತ್ತು. ಸಮಾಜಘಾತುಕ ಶಕ್ತಿಯಾಗಿದ್ದ ಎಲ್ ಟಿಟಿಇಯನ್ನು ಹೇಗಾದರು ಮಾಡಿ ಇದನ್ನು ಬುಡಸೇಮೇತ ಕಿತ್ತುಹಾಕಬೇಕು ಎಂದು ಸರಕಾರ ನಿರ್ಧಾರ ಮಾಡಿತು. ಅದರಲ್ಲಿ ಯಶಸ್ವಿಯಾಗಿದ್ದೇವೆ. ಇದು ಲಂಕನ್ನರಿಗೆ ನಿಜವಾದ ಸ್ವಾತಂತ್ರ ಬಂದ ದಿನ. ದೇಶ ಇಂದು ಉಗ್ರರಿಂದ ಮುಕ್ತಿಪಡೆದಂತಾಗಿದೆ ಎಂದು ರಾಜಪಕ್ಷ್ಸೆ ಹೇಳಿದರು.
ಎಲ್ ಟಿಟಿಇ ವಿರುದ್ಧ ದಿಗ್ವಿಜಯ ಸಾಧಿಸಿದ ಸಂಗತಿಯನ್ನು ಅಧ್ಯಕ್ಷ ರಾಜಪಕ್ಷ್ಸೆ ವಿವರಿಸುತ್ತಿದ್ದರೆ, ಅತ್ತ ಎಲ್ಲ ಸಂಸದರು ಹರ್ಷದಿಂದ ಮೇಜು ಕುಟ್ಟಿ ಸಂತಸ ಹಂಚಿಕೊಳ್ಳುತ್ತಿದ್ದರು. ಎಲ್ ಟಿಟಿಇ ಸಂಘಟನೆಗೆ ಚರಮಗೀತೆ ಹಾಡಲಾಗಿದೆ. ಆದರೆ, ಲಂಕಾದಲ್ಲಿರುವ ಎಲ್ಲ ತಮಿಳರ ರಕ್ಷಣೆ ಸರಕಾರದ್ದು, ಅವರಿಂದ ನಾವು ಹಿಂದೆ ಸರಿಯುವುದಿಲ್ಲ. ತಮಿಳರ ರಕ್ಷಣೆ ಸರಕಾರದ ಏಕೈಕ ಆಧ್ಯತೆ. ಸಿಂಹಳಿಯರಿಗೆ ಸಿಗುತ್ತಿರುವ ಎಲ್ಲ ಸೌಲಭ್ಯಗಳನ್ನು ತಮಿಳರಿಗೆ ನೀಡಲು ನಾವು ಸಿದ್ದರಿದ್ದೇವೆ. ಅದು ನಮ್ಮ ಕರ್ತವ್ಯವೂ ಹೌದು ಎಂದು ರಾಜಪಕ್ಷ್ಸೆ ಭರವಸೆ ನೀಡಿದರು. ತಮಿಳು ನಿರಾಶ್ರಿತರಿಗೆ ಪರಿಹಾರ ನೀಡಿರುವ ಭಾರತದ ಕ್ರಮವನ್ನು ಸ್ವಾಗತಿಸಿದ ರಾಜಪಕ್ಷ್ಸೆ, ದೇಶದ ಕಾನೂನು ರೀತಿಯಲ್ಲಿ ತಮಿಳರು ಯಾವುದೇ ಭಯವಿಲ್ಲದೇ ಲಂಕಾದಲ್ಲಿ ನೆಲೆಸಬಹುದು ಎಂದು ಹೇಳಿದರು.
(ಏಜನ್ಸೀಸ್)