ವೀರಯೋಧ ಸಂದೀಪ್ ಅವರಿಗೆ ಅಂತಿಮ ನಮನ
ಬೆಂಗಳೂರು, ನ.29: ತಾಜ್ ಹೋಟೆಲ್ ನಲ್ಲಿ ಉಗ್ರರೊಂದಿಗಿನ ಹೋರಾಟದಲ್ಲಿ ವೀರಮರಣ ಅಪ್ಪಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಮನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಭೇಟಿ ನೀಡಿದರು. ಅವರು ಮಾತಾಡುತ್ತಾ,''ದೇಶಕ್ಕಾಗಿ ಪ್ರಾಣ ತೆತ್ತ ಈ ವೀರ ಯೋಧನಿಗೆ ನಮನ ಅರ್ಪಿಸುತ್ತಿದ್ದೇನೆ. ಅವರ ಕುಟುಂಬದವರಿಗೆ ಈ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ. ಸರ್ಕಾರದಿಂದ ಏನು ಸಾಧ್ಯವಾಗುತ್ತದೋ ಅಷ್ಟು ಸಹಾಯವನ್ನು ಅವರ ಕುಟುಂಬಕ್ಕೆ ನೀಡುವುದಾಗಿ'' ಭರವಸೆ ನೀಡಿದರು.
ತಾಜ್ ಹೋಟೆಲ್ ಗೆ ನುಸುಳಿದ್ದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ಭದ್ರತಾ ಪಡೆಯ ಮೇಜರ್ ಸಂದೀಪ್ ಉನ್ನಿಕೃಷ್ಣನ್(31) ಶುಕ್ರವಾರ ವೀರ ಮರಣ ಅಪ್ಪಿದರು. ಶನಿವಾರ ಮಧ್ಯಾಹ್ನ ಅವರ ಅಂತ್ಯಕ್ರಿಯೆ ಯಲಹಂಕದಲ್ಲಿ ನೆರವೇರಲಿದೆ. ಸಂದೀಪ್ ಅವರ ಅಂತ್ಯಕ್ರಿಯೆಗೆ ಬೆಂಗಳೂರಿನಲ್ಲಿ ಅಪಾರ ಜನಸ್ತೋಮ ಆಗಮಿಸಿದೆ. ಒಂದು ವರ್ಷದ ಹಿಂದಷ್ಟೇ ವಿವಾಹವಾದ ಬೆಂಗಳೂರಿನವರಾದ ಉನ್ನಿಕೃಷ್ಣನ್ ಪೋಷಕರು ಮತ್ತು ಪತ್ನಿಯನ್ನು ಅಗಲಿದ್ದಾರೆ. ಬೆಂಗಳೂರಿನ ಯಲಹಂಕದ ಅರಸನಹಳ್ಳಿ ಇಸ್ರೊ ಆಕಾಶ್ ಲೇಔಟ್ ನ 2ನೇ ಮುಖ್ಯರಸ್ತೆಯ ಮನೆಯಲ್ಲಿ ಸಂದೀಪ್ ಪೋಷಕರು ವಾಸವಾಗಿದ್ದಾರೆ.
ಸಂದೀಪ್ ಉನ್ನಿಕೃಷ್ಣನ್ 1999ರ ಜೂನ್ 12ರಂದು ಭಾರತೀಯ ಸೇನೆಯ ಬಿಹಾರದ 7ನೇ ರೆಜಿಮೆಂಟ್ ಮೂಲಕ ಸೇವೆಗೆ ಸೇರಿದ್ದರು. ದಕ್ಷ, ಪ್ರಾಮಾಣಿಕ ಹಾಗೂ ಧೈರ್ಯಶಾಲಿ ಯೋಧ ಎಂದೇ ಹೆಸರಾಗಿದ್ದರು. ಜಮ್ಮು ಮತ್ತ್ತು ಕಾಶ್ಮೀರದಲ್ಲಿ ಉಗ್ರರ ಹೋರಾಟದ ಎರಡು ಕಾರ್ಯಾಚರಣೆಯಲ್ಲಿ ಸಂದೀಪ್ ಪಾಲ್ಗೊಂಡಿದ್ದರು. 2007ರ ಜ.20ರಂದು ರಾಷ್ಟ್ರೀಯ ಭದ್ರತಾ ಪಡೆಗೆ ಸೇರ್ಪಡೆಗೊಂಡಿದ್ದರು. ಎನ್ ಎಸ್ ಜಿಯ ಅನೇಕ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡು ಧೈರ್ಯ, ಸಾಹಸಗಳನ್ನು ಮೆರೆದಿದ್ದರು.
''ನಾನು ಉಗ್ರರ ವಿರುದ್ಧ ಹೋರಾಡಿ ಗೆದ್ದೇ ಗೆಲ್ಲುತ್ತೇನೆ. ನನ್ನ ಕೌಶಲವನ್ನು ಒರೆಗೆ ಹಚ್ಚ್ಚಲು ಸೂಕ್ತ ಕಾಲ ಒದಗಿ ಬಂದಿದೆ'' ಎಂದು ಸಂದೀಪ್ ಅವರ ತಾಯಿಯ ಬಳಿ ಹೆಮ್ಮೆಯಿಂದ ಹೇಳಿಕೊಂಡಿದ್ದ. ಉಗ್ರರ ವಿರುದ್ಧ ಹೋರಾಡಿ ವೀರ ಮರಣ ಅಪ್ಪಿ ನಿಜಕ್ಕೂ ಅವರು ಗೆದ್ದಿದ್ದಾರೆ. ಅವರ ಕುಟುಂಬಕ್ಕೆ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಕೋರುತ್ತಾ ದಟ್ಸ್ ಕನ್ನಡ ವೀರಯೋಧನಿಗೆ ಅಂತಿಮ ನಮನ ಸಲ್ಲಿಸುತ್ತಿದೆ.
ಈ ಸಂದರ್ಭದಲ್ಲಿ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ಸಂಸದ ಅನಂತ್ ಕುಮಾರ್ , ಸೇನಾಧಿಕಾರಿಗಳು ಹಾಗೂ ಅಪಾರ ಜನಸ್ತೋಮ ಯಲಹಂಕದ ಅವರ ಮನೆಗೆ ಭೇಟಿ ಸಂದೀಪ್ ಗೆ ಅಂತಿಮ ನಮನ ಸಲ್ಲಿಸಿದರು.
(ದಟ್ಸ್ ಕನ್ನಡ ವಾರ್ತೆ)