ಲೋಕಸಭೆಗೆ ಸ್ಪರ್ಧಿಸುವುದಿಲ್ಲ : ಅಂಬರೀಷ್
ಬೆಂಗಳೂರು, ನ. 12 : ಆಪರೇಶನ್ ಕಮಲದ ಬಲೆಗೆ ಬೀಳುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಚಿತ್ರ ನಟ ಹಾಗೂ ಮಾಜಿ ಸಂಸದ ಅಂಬರೀಷ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳುವ ಮೂಲಕ ಅನೇಕ ದಿನಗಳಿಂದ ಹಬ್ಬಿದ್ದ ಉಹಾಪೋಹಕ್ಕೆ ಇಂದು ತೆರೆ ಎಳೆದಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸೇರ್ಪಡೆ ಶುದ್ಧ ಸುಳ್ಳು ಎಂದರು. ಅಪರೇಷನ್ ಕಮಲದಿಂದ ಅಂಬರೀಷ ಅವರು ಬಿಜೆಪಿ ಸೇರ್ಪಡೆಯಾಗುತ್ತಾರೆ. ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವುದು ಸ್ಪಷ್ಟವಾಗಿ ಅಲ್ಲಗೆಳೆದ, ಅವರು ಯಾವ ಕಾರಣಕ್ಕೂ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಇದರಲ್ಲಿಯೇ ಮುಂದುವರೆಯುವ ಇಂಗಿತವನ್ನು ವ್ಯಕ್ತಪಡಿಸಿದರು.
ಈ ಮಧ್ಯೆ ಸಾರಿಗೆ ಸಚಿವ ಆರ್ ಅಶೋಕ್ ಮಾತನಾಡಿ, ದಕ್ಷಿಣ ಕರ್ನಾಟಕದಲ್ಲಿ ಅಪರೇಷನ್ ಕಮಲವನ್ನು ಆರಂಭಿಸಲಾಗಿದೆ. ಯಾವ ಕಾರಣಕ್ಕೂ ಅದು ನಿಲ್ಲುವುದಿಲ್ಲ. ಪಕ್ಷದ ಅಭಿವೃದ್ಧಿ ಕಾರ್ಯ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಮರ್ಥ ನಾಯಕತ್ವ ಮೆಚ್ಚಿ ಅನ್ಯ ಪಕ್ಷಗಳ ಅನೇಕ ಮುಖಂಡರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಇಂದು ಮತ್ತೊಮ್ಮ ಪುನರುಚ್ಚರಿಸಿದರು.
(ದಟ್ಸ್ ಕನ್ನಡ ವಾರ್ತೆ)