ಬಸವನಗುಡಿಯ ಮನೆಯಲ್ಲಿ ಕಣ್ತೆರೆದ ಸಾಯಿಬಾಬಾ
ಶಿರಡಿ ಸಾಯಿಬಾಬಾನ ಪರಮಭಕ್ತರಾಗಿರುವ ಲಕ್ಷ್ಮಿ ಎಂಬುವವರು ಶಿರಡಿಯಿಂದ ಸಾಯಿಬಾಬಾ ಮೂರ್ತಿ ತಂದಿದ್ದರು. ಪ್ರತಿನಿತ್ಯ ಮನೆಯಲ್ಲಿ ಬಾಬಾಗೆ ಪೂಜೆ ಸಲ್ಲಿಸಲಾಗುತ್ತಿತ್ತು. ಆದರೆ ಗುರುವಾರ(ಗುರು ಪೂರ್ಣಿಮಾ) ರಾತ್ರಿ ಇದ್ದಕ್ಕಿದ್ದ ಹಾಗೇ ಸಾಯಿಬಾಬಾ ಮೂರ್ತಿಯ ಎಡಗಣ್ಣು ತೆರೆದುಕೊಂಡಿದೆ. ಅವಾಕ್ಕಾದ ಲಕ್ಷ್ಮಿ ಕುಟುಂಬದವರು ಪಕ್ಕದ ಮನೆಯವರಿಗೆ ಈ ವಿಷಯ ತಿಳಿಸಿದ್ದಾರೆ.
ಈ ವಿಷಯ ಬೆಂಗಳೂರಿನಾದ್ಯಂತ ಹರಡಿ, ಲಕ್ಷ್ಮಿ ಅವರ ಮನೆ ಮುಂದೆ ನಗರದೆಲ್ಲೆಡೆಯಿಂದ ಜನ ಜಮಾಯಿಸಿ ಈ ವಿಸ್ಮಯ ನೋಡಲು ಮುಗಿಬೀಳುತ್ತಿದ್ದಾರೆ. ಕೆಲವರು ಸುಮ್ಮನೆ ಮೂರ್ತಿ ವೀಕ್ಷಿಸಿದರೆ, ಇನ್ನೂ ಕೆಲವರು ಸಾಕ್ಷಾತ್ ಸಾಯಿಬಾಬಾನೇ ಇರಬೇಕೆಂದು ವರ್ಣಿಸುತ್ತಿದ್ದಾರೆ.
ಲಕ್ಷ್ಮಿ ಅವರ ಮನೆಮುಂದೆ ಜನಸಾಗರ ನಿಯಂತ್ರಿಸಲು ಪೊಲೀಸ್ ಇಲಾಖೆ ಹರಸಾಹಸ ನಡೆಸಿದೆ. ಮೂರ್ತಿ ನೋಡುವ ಭರದಲ್ಲಿ ನೂಕುನುಗ್ಗಲು ಆರಂಭವಾಗಿದೆ. ಭದ್ರತೆಗಾಗಿ ಪೊಲೀಸ್ ರನ್ನು ನಿಯೋಜಿಸಲಾಗಿದೆ. ಇದಕ್ಕೆ ಜಮಮರುಳು ಅಂತಿರೋ, ಜಾತ್ರೆ ಮರುಳೋ ಅಂತಿರೋ ನಿಮಗೆ ಬಿಟ್ಟಿದ್ದು. ಎಲ್ಲವೂ ಸಾಯಿಬಾಬಾ ಮಹಿಮೆ ಅಲ್ಲವೇ ?
(ದಟ್ಸ್ ಕನ್ನಡ ವಾರ್ತೆ)