ಮತದಾರರ ಪರಿಷ್ಕೃತ ಪಟ್ಟಿ ತಯಾರಿಕಾ ಪ್ರಕ್ರಿಯೆ ಚುರುಕು
ಬೆಂಗಳೂರು, ಜ.02 : ಇದೇ ಮೇನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಯಿರುವುದರಿಂದ ಮತದಾರರ ಪರಿಷ್ಕೃತ ಪಟ್ಟಿ ತಯಾರಿಸುವ ಪ್ರಕ್ರಿಯೆ ರಾಜ್ಯದಲ್ಲಿ ಚುರುಕುಗೊಂಡಿದೆ.
ಕರ್ನಾಟಕದಲ್ಲಿ ಮತದಾರರ ಪಟ್ಟಿ ತಯಾರಿಸುವಲ್ಲಿ ವಿಳಂಬವಾಗುತ್ತಿದೆಯೆಂದು ರಾಜ್ಯ ಚುನಾವಣಾ ಆಯೋಗಕ್ಕೆ ಕೇಂದ್ರ ಆಯೋಗ ಅತೃಪ್ತಿ ವ್ಯಕ್ತಪಡಿಸಿತ್ತು. ಪ್ರಕ್ರಿಯೆ ಚುರುಕುಗೊಳಿಸಲು ಉಪಚುನಾವಣಾಧಿಕಾರಿ ಆರ್ ಭಟ್ಟಾಚಾರ್ಯ ಅವರನ್ನು ಕೇಂದ್ರ ಚುನಾವಣಾ ಆಯೋಗ ಇಲ್ಲಿಗೆ ಕಳಿಸಿತ್ತು.
ಮಂಗಳವಾರ ಆಗಮಿಸಿದ ಭಟ್ಟಾಚಾರ್ಯ ಅವರು ರಾಜ್ಯದ ಮುಖ್ಯ ಚುನಾವಣಾಧಿಕಾರಿ ರಾಮಶೇಷನ್ ಮತ್ತು ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸುಬ್ರಮಣ್ಯ ಅವರೊಂದಿಗೆ ಈಕುರಿತು ವಿಸ್ತೃತವಾಗಿ ಚರ್ಚೆ ನಡೆಸಿದರು.
ಮತದಾರರ ಪರಿಷ್ಕೃತ ಪಟ್ಟಿ ತಯಾರಿಸಲು ಜನವರಿ 1, 2008 ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಆದರೆ, ಎಣಿಸಿದ್ದಕ್ಕಿಂತ ಪ್ರಕ್ರಿಯೆ ನಿಧಾನವಾದ ಕಾರಣ ಕೇಂದ್ರದ ಉಪಚುನಾವಣಾಧಿಕಾರಿ ಇನ್ನೂ ಮೂರು ದಿನ ಇಲ್ಲೇ ಠಿಕಾಣಿ ಹೂಡಲಿದ್ದು ಮತಪಟ್ಟಿಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
(ಯುಎನ್ಐ)