ಮತಾಂತರ ತಡೆಗೆ ಪೇಜಾವರ ಶ್ರೀ ಸ್ವಯಂಸೇವಕರ ಪಡೆ
ಬಳ್ಳಾರಿ : ವಿವಾದ ರಹಿತ ಭೂಮಿಯನ್ನು ರಾಮ ಜನ್ಮಭೂಮಿ ನ್ಯಾಸ್ಗೆ ಬೇಗ ಹಸ್ತಾಂತರಿಸಿ ಎಂದು ಕೋರಿ ಪ್ರಧಾನಿ ಎ.ಬಿ.ವಾಜಪೇಯಿ ಅವರಿಗೆ ಪತ್ರ ಬರೆದಿರುವುದಾಗಿ ನ್ಯಾಸ್ನ ಉಪಾಧ್ಯಕ್ಷರೂ ಆಗಿರುವ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.
ನಗರದಲ್ಲಿ ಪುರಂದರ ದಾಸರ ಆರಾಧನೆಯನ್ನು ಉದ್ಘಾಟಿಸಿದ ಸಂದರ್ಭದಲ್ಲಿ ವಿಶ್ವೇಶ ತೀರ್ಥರು ಈ ವಿಷಯ ತಿಳಿಸಿದರು. ಫೆಬ್ರವರಿ 21 ಹಾಗೂ 22ನೇ ತಾರೀಕು ದೆಹಲಿಯಲ್ಲಿ ಧರ್ಮ ಸಂಸತ್ ನಡೆಯಲಿದ್ದು, ವಿವಾದ ರಹಿತ ಭೂಮಿಯ ವಿಷಯದಲ್ಲಿ ಮುಂದೇನು ಮಾಡಬೇಕೆಂದು ಚರ್ಚಿಸಲಾಗುವುದು. ಕೇಂದ್ರ ಸರ್ಕಾರ ಎದುರಿಸುತ್ತಿರುವ ಅಡಚಣೆಗಳೂ ನನಗೆ ಗೊತ್ತು. ವಿಶ್ವ ಹಿಂದೂ ಪರಿಷತ್ ಈ ನಿಟ್ಟಿನಲ್ಲಿ ಹೊಸ ಚಿಂತನೆ ಹೊಸೆದಿದೆ ಎಂದರು.
ಅಯೋಧ್ಯೆಯಲ್ಲಿ 1 ಎಕರೆ ಜಾಗ ವಿವಾದಾಸ್ಪದವಾದದ್ದು. ಉಳಿದ 70 ಎಕರೆ ಪ್ರದೇಶ ವಿವಾದ ರಹಿತವಾದದ್ದು. ಈ ಜಾಗವನ್ನು ನ್ಯಾಸ್ಗೆ ಹಸ್ತಾಂತರಿಸಿದರೆ ಅಡ್ಡಿಯಿಲ್ಲ. ಶಿಲಾ ನ್ಯಾಸ್ಗೆ 8 ವಾರಗಳ ಕಾಲ ಪೂಜೆ ಮಾಡಕೂಡದೆಂದು ಸುಪ್ರಿಂಕೋರ್ಟ್ ಆದೇಶಿಸಿತ್ತು. 8 ವಾರಗಳ ಅವಧಿ ಈಗ ಪೂರೈಸಿದೆ ಎಂದು ಪೇಜಾವರ ಶ್ರೀ ವಿವರಣೆ ಕೊಟ್ಟರು.
ಮತಾಂತರ ತಡೆಗೆ ಸ್ವಯಂ ಸೇವಕರಿಗೆ ತರಪೇತಿ : ಮತಾಂತರ ಪ್ರಕ್ರಿಯೆ ಉಲ್ಬಣಗೊಳ್ಳುತ್ತಿರುವುದಕ್ಕೆ ಆತಂಕ ವ್ಯಕ್ತ ಪಡಿಸಿದ ವಿಶ್ವೇಶ ತೀರ್ಥರು, ಸರ್ಕಾರ ಈ ಪಿಡುಗು ಹೋಗಲಾಡಿಸಲು ಟೊಂಕಕಟ್ಟಬೇಕೆಂದು ಕರೆ ನೀಡಿದರು. ಕೆಲವು ಸ್ವಯಂ ಸೇವಕರನ್ನು ಆರಿಸಿ, ಮತಾಂತರಕ್ಕೆ ಮನಸ್ಸು ಮಾಡುವ ಮಂದಿಯಲ್ಲಿ ಜಾಗೃತಿ ಮೂಡಿಸುವಂತೆ ಅವರಿಗೆ ತರಬೇತಿ ಕೊಡುವ ಯೋಚನೆಯಿದೆ. ಮತಾಂತರ ಎಲ್ಲಿ ಹೆಚ್ಚಾಗಿರುತ್ತದೋ ಅಲ್ಲಿಗೆ ತರಪೇತಿ ಪಡೆದ ಸ್ವಯಂ ಸೇವಕರು ಹೋಗಿ, ಜನರಲ್ಲಿ ಮತಾಂತರವಾಗದಂತೆ ಜಾಗೃತಿ ಮೂಡಿಸಲಿದ್ದಾರೆ. ತಮ್ಮ ಧರ್ಮದ ಬಗೆಗೆ ನಿರಾಸಕ್ತಿ ಯಾತಕ್ಕೆ ಬಂತು ಎಂಬುದನ್ನು ತಿಳಿದು, ಅವರ ಸಮಸ್ಯೆಗೆ ಪರಿಹಾರ ಕೊಡುವ ಕೆಲಸವನ್ನೂ ಸ್ವಯಂ ಸೇವಕರು ಮಾಡಲಿದ್ದಾರೆ ಎಂದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...