Coconut: ರೈತರ ನಿದ್ದೆಗೆಡಿಸಿದ ತೆಂಗಿನ ರೋಗ: ಶೇ.14ರಷ್ಟು ತೋಟಗಳಿಗೆ ಕೀಟಬಾಧೆ; ತಜ್ಞರ ತಂಡ ಪರಿಶೀಲನೆ
ತೆಂಗು ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕವು ಒಂದು. ಈ ತೆಂಗು ಬೆಳೆ ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುತ್ತದೆ. ಬೆಳೆಗಾರರಿಗೆ ಆರ್ಥಿಕವಾಗಿ ನೆರವಾಗಿದೆ. ಇತ್ತೀಚಿನ ದಿನಗಳಲ್ಲಿ ತೆಂಗಿನ ತೋಟಗಳಲ್ಲಿ ಕೀಟ ಮತ್ತು ರೋಗ ಬಾಧೆ ಹೆಚ್ಚಾಗುತ್ತಿದೆ. ಈ ಸ್ಥಿತಿಯು ರೈತರ ನಿದ್ದೆಗೆಡಿಸಿದೆ. ಗ್ರಾಮೀಣ ಆರ್ಥಿಕತೆಗ ಪೂರಕವಾದ ಹಲವಾರು ತೋಟಗಳಿಗೆ ಈ ರೋಗಬಾಧೆ ಸಮಸ್ಯೆ ವಿಸ್ತರಿಸುತ್ತಿದೆ. ಕರ್ನಾಟಕದಂತಹ ಪ್ರಮುಖ ಉತ್ಪಾದಕ ರಾಜ್ಯಗಳಲ್ಲಿ ಸಮಸ್ಯೆ ಹೆಚ್ಚಾಗುತ್ತಿದೆ. ಇದರ ನಿವಾರಣೆ ಕುರಿತು ಇತ್ತೀಚೆಗೆ ಲೋಕಸಭೆಯಲ್ಲಿ ಮಹತ್ವದ ಚರ್ಚೆಗಳಾಗಿದ್ದು, ಹಲವು ಕ್ರಮಗಳನ್ನು ಶಿಫಾರಸು ಮಾಡಲಾಗಿದೆ.
ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಮತ್ತು ತೆಂಗಿನಕಾಯಿ ಅಭಿವೃದ್ಧಿ ಮಂಡಳಿ (CDB)ಯ ತಜ್ಞರು ಹಾಗೂ ಅಧಿಕಾರಿಗಳು ತೆಂಗಿಗೆ ಕೀಟ ದಾಳಿಗಳು ಋತುವಿನಲ್ಲಿ ಕಂಡು ಬರುತ್ತಿದೆ. ಕೆಲವೆಡೆ ಆ ಸಮಸ್ಯೆ ಸ್ಥಿರವಾಗಿದ್ದು ಕಳವಳಕಾರಿಯಾಗಿದೆ ಎಂದು ಹೇಳಿದ್ದಾರೆ. ಇದು ತೆಂಗಿನಕಾಯಿ ಉತ್ಪಾದನೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಉತ್ಪಾದನೆ ಕುಂಠಿತಗೊಳಿಸುತ್ತದೆ. ಗ್ರಾಮೀಣ ಕೃಷಿ ಆರ್ಥಿಕತೆಗೆ ಹೊಡೆತ ನೀಡುವ ಸಾಧ್ಯತೆ ಇದೆ.

ರೋಗ ನಿವಾರಣೆಗೆ 174.55 ಕೋಟಿ ರೂ.ವ್ಯಯ
ಕರ್ನಾಟಕದಲ್ಲಿ ಈ ಹಿಂದೆ ರೋಗ ಬಾಧೆ ಹೆಚ್ಚಾಗಿದ್ದರಿಂದ 2024 ರಲ್ಲಿ ಪ್ರಮುಖ ತೆಂಗಿನಕಾಯಿ ಕೀಟಗಳು ಮತ್ತು ರೋಗಗಳನ್ನು ನಿರ್ಣಯಿಸಲು 'ಕಾರ್ಯಪಡೆ ಮತ್ತು ಕೇಂದ್ರ ತಜ್ಞರ ತಂಡ' ರಚಿಸಲಾಗಿತ್ತು. ತೆಂಗಿನ ಪ್ರದೇಶದ ಸುಮಾರು ಶೇ. 12.2 ರಿಂದ 14.7ರಷ್ಟು ಕೀಟಗಳು ಮತ್ತು ರೋಗಗಳಿಂದ ಬಾಧೆಗೊಳಗಾಗಿರುವುದನ್ನು ಪತ್ತೆ ಮಾಡಲಾಗಿದೆ. ಸೂಕ್ತ ನಿರ್ವಹಣಾ ಕ್ರಮಗಳನ್ನು ಶಿಫಾರಸು ಮಾಡಿಲಾಗಿದೆ ಎಂದು ಕೇಂದ್ರ ಸಚಿವಾಲಯ ಮಾಹಿತಿ ನೀಡಿದೆ. ರೋಗ ನಿಯಂತ್ರಣಕ್ಕಾಗಿ ಕರ್ನಾಟಕದಲ್ಲಿ 174.55 ಕೋಟಿ ರೂ. ವ್ಯಯಿಸಲಾಗಿದೆ. ಉತ್ಪಾದನೆ ಹೆಚ್ಚಿಸಲು ಮತ್ತು ಕೀಟ, ರೋಗ ನಿರ್ವಹಣೆಗೆ ಹೆಚ್ಚಿ ಒತ್ತು ನೀಡಿ ಕ್ಷೇತ್ರಾಧಾರಿತ ಕೆಲವು ಪರಿಹಾರ ಯೋಜನೆ ಜಾರಿಗೊಳಿಸಲಾಯಿತು ಎಂದು ಲೋಕಸಭೆಯಲ್ಲಿ ವಿವರಿಸಲಾಗಿದೆ.
ದಕ್ಷಿಣದ ರಾಜ್ಯಗಳಲ್ಲಿ ಅಧಿಕ ತೆಂಗಿನಕಾಯಿ ಉತ್ಪಾದನೆ
ದಕ್ಷಿಣ ಭಾರತದಲ್ಲಿ ತೆಂಗು ಉತ್ಪಾದನೆ ಅಧಿಕ. ಆ ಪೈಕಿ ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು ರಾಜ್ಯಗಳು ಪ್ರಮುಖ ಸ್ಥಾನ ಪಡೆದಿವೆ. ಆದರೆ ದುರದೃಷ್ಟವಶಾತ್ ಇದೇ ಭಾಗದಲ್ಲಿ ಈ ರೋಗ ಬಾಧೆ ಹೆಚ್ಚಾಗಿದ್ದು ಕಳವಳಕಾರಿಯಾಗಿದೆ. ಕರ್ನಾಟಕದಲ್ಲಿ ತಿಪಟೂರು ತೆಂಗಿನಕಾಯಿ ಬೆಳೆಗೆ ಹೆಚ್ಚು ಪ್ರಸಿದ್ಧಿ ಪಡೆದ ಪ್ರದೇಶವಾಗಿದೆ. ಇಲ್ಲಿ ಉತ್ಪಾದನೆ, ವ್ಯಾಪಾರ ವಹಿವಾಟು ಪ್ರತಿ ವರ್ಷವು ಅಧಿಕವಾಗಿರುತ್ತದೆ.
ಕರ್ನಾಟಕದ ತಿಪಟೂರಿಗೆ ಜಿಐ ಟ್ಯಾಗ್?
ತೆಂಗಿನ ಬೆಳೆ ಉತ್ಪಾದನೆಯಲ್ಲಿ ಈ ತಿಪಟೂರಿಗೆ ಜಿಐ ಟ್ಯಾಗ್ ಪಡೆಯುವ ಪ್ರಯತ್ನಗಳು ನಡೆಯುತ್ತಿವೆ. ಸದ್ಯ ಕೊಬ್ಬರಿಗೆ ಹೆಚ್ಚಿನ ಬೇಡಿಕೆಯಿದೆ. ಇಲ್ಲಿನ ಎಪಿಎಂಸಿ ಮಾರುಕಟ್ಟೆಯು ಡಿಜಿಟಲ್ಗೆ ಬದಲಾದ ಮೊದಲ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಅನೇಕ ರಾಜಕಾರಣಿಗಳು ಹೆಚ್ಚು ತೆಂಗಿನಕಾಯಿ ಉತ್ಪಾದನೆಯ ಈ ಸ್ಥಳದ ನಿವಾಸಿಗಳು, ಬೆಳೆಗಾರರು, ಜಾತಿ ರಾಜಕಾರಣ ಲೆಕ್ಕಾಚಾರವನ್ನು ಹಾಕುತ್ತಾರೆಂದು ತಜ್ಞರು ವಿಶ್ಲೇಷಿಸಿದ್ದಾರೆ.
ಜಾಗತಿಕವಾಗಿ ತೆಂಗಿನಕಾಯಿ ಉತ್ಪಾದನೆ
ಜಾಗತಿಕವಾಗಿ ನೋಡುವುದಾದರೆ ಭಾರತ ಪ್ರಪಂಚದಲ್ಲಿ ಹೆಚ್ಚು ತೆಂಗಿನಕಾಯಿ ಉತ್ಪಾದಿಸುವ ರಾಷ್ಟ್ರವಾಗಿದೆ. ಶೇ.30.37ರಷ್ಟು ತೆಂಗು ಉತ್ಪಾದನೆಯಲ್ಲಿ ಕೊಡುಗೆ ಭಾರತ ನೀಡುತ್ತದೆ. ತೆಂಗಿನಕಾಯಿ ಕೃಷಿ ಜಾಗತಿಕವಾಗಿ ಸುಮಾರು 12,390 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಿಸ್ತರಣೆ ಆಗಿದೆ. ಭಾರತದಲ್ಲಿ ತೆಂಗು ಬೆಳೆಯನ್ನು ನಾವು 2,165.2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಾಣಬಹುಯದಾಗಿದೆ. ಇನ್ನೂ ವಾರ್ಷಿಕವಾಗಿ ಸುಮಾರು 21,373.62 ಮಿಲಿಯನ್ ತೆಂಗಿನಕಾಯಿಗಳ ಉತ್ಪಾದನೆ ಆಗುತ್ತದೆ. ಜಾಗತಿಕವಾಗಿ ಮೂರು ಕೋಟಿ (30 ಮಿಲಿಯನ್) ಜನರು ತೆಂಗು ಕೃಷಿಯ ಆಧಾರದ ಮೇಲೆಯೋ ಜೀವನ ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಸೇರಿದಂತೆ ಭಾರತದಲ್ಲಿ ತೆಂಗು ಬೆಳೆ ಬೆಳೆಯುವುದು ಏರಿಕೆ ಆಗುತ್ತಿದೆ.
ತೆಂಗು ಉತ್ಪಾದನೆಯಲ್ಲಿ ಕರ್ನಾಟಕದ ಕೊಡುಗೆ
ದೇಶದ ಒಟ್ಟು ತೆಂಗು ಉತ್ಪಾದನೆಯಲ್ಲಿ ಸುಮಾರು ಶೇ. 28.5ರಷ್ಟು ಉತ್ಪಾದನೆ ಕರ್ನಾಟಕ ರಾಜ್ಯ ಒಂದರಲ್ಲಾಗುತ್ತದೆ. 2023-24ರಲ್ಲಿ ರಾಜ್ಯದಲ್ಲಿ 564.62 ಸಾವಿರ ಹೆಕ್ಟೇರ್ ಪ್ರದೇಶದಿಂದ 6,151 ಮಿಲಿಯನ್ ತೆಂಗಿನಕಾಯಿ ಉತ್ಪಾದನೆಯಾಗಿದೆ. ಅಂದರೆ ಪ್ರತಿ ಹೆಕ್ಟೇರ್ಗೆ 10,894 ತೆಂಗಿನಕಾಯಿ ಇಳುವರಿ ಬರು್ತದೆ. ಕರ್ನಾಟಕದಲ್ಲಿ ಸುಮಾರು 7.06 ಲಕ್ಷ ರೈತರು ತೆಂಗಿನ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವರದಿ ಆಗಿದೆ.












Click it and Unblock the Notifications