ಅತಿಥಿಯಾಗಿ ಬಂದು ಶಾಮಿಯಾನ ಕುರಿತು ತಕರಾರು ಎತ್ತಿದ ಸಾಂಗ್ಲಿಯಾನ!
ಬೆಂಗಳೂರು : ಸ್ಲಂ ನಿವಾಸಿಗಳಿಗೆ ಅಗ್ಗದ ದರದಲ್ಲಿ ಪತ್ರಿಕೆ ಹಂಚುವ ಯೋಜನೆಯ ಉದ್ಘಾಟನಾ ಸಮಾರಂಭಕ್ಕೆ ಬಂದ ನಗರ ಪೊಲೀಸ್ ಕಮಿಷನರ್ ಎಚ್. ಟಿ. ಸಾಂಗ್ಲಿಯಾನಾ, ರಸ್ತೆ ಮಧ್ಯದಲ್ಲಿ ಶಾಮಿಯಾನಾ ಹಾಕಿದ್ದನ್ನು ಕಂಡು ಆಯೋಜಕರನ್ನು ದಬಾಯಿಸಿದ ಘಟನೆ ಸೋಮವಾರ ನಡೆಯಿತು.
ಅದು ಆರ್. ಪಿ. ಸಿ. ಬಡಾವಣೆಯ ಹೊಸಹಳ್ಳಿ. ಅಲ್ಲಿನ ಕೊಳೆಗೇರಿ ನಿವಾಸಿಗಳಿಗೆ 50 ಪೈಸೆಗೊಂದು ಪತ್ರಿಕೆಯನ್ನು ನೀಡುವ ಹೊಸ ಯೋಜನೆಯ ಉದ್ಘಾಟನಾ ಸಮಾರಂಭ. ಸಮಾರಂಭಕ್ಕೆ ಅತಿಥಿಯಾಗಿದ್ದ ಸಾಂಗ್ಲಿಯಾನಾ ಅರ್ಧಗಂಟೆ ತಡವಾಗಿ ಬಂದಿದ್ದರು. ರಸ್ತೆ ಮಧ್ಯದಲ್ಲಿ ಪೆಂಡಾಲ್ ಹಾಕಿ ವೇದಿಕೆ ನಿರ್ಮಿಸಿದ್ದನ್ನು ಕಂಡು, ‘ಹೀಗೆ ಶಾಮಿಯಾನಾ ಹಾಕಿ ಸಾರ್ವಜನಿಕರಿಗೆ ಏಕೆ ತೊಂದರೆ ಮಾಡುತ್ತೀರಿ. ಇಂತಹ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುವುದಿಲ್ಲ’ ಎಂದು ಪೆಂಡಾಲ್ನ ಮುಂದೆ ಕಾರಿನಲ್ಲೇ ಕುಳಿತುಕೊಂಡು ಬೈಗುಳ ಶುರು ಮಾಡಿದರು.
ಸಮಾರಂಭ ಸಂಘಟಕರು ತಾವು ಪೆಂಡಾಲ್ ಹಾಕಲು ವಿಜಯನಗರ ಪೊಲೀಸ್ ಠಾಣೆಯಿಂದ ಅನುಮತಿ ಪಡೆದಿರುವುದಾಗಿ ಹೇಳಿದಾಗ, ಇನ್ಸ್ಪೆಕ್ಟರ್ನ್ನು ಸ್ಥಳಕ್ಕೆ ಕರೆಸಿ, ರಸ್ತೆ ಮಧ್ಯೆ ಕಾರ್ಯಕ್ರಮ ನಡೆಸಲು ಯಾಕ್ರೀ ಅನುಮತಿ ಕೊಡ್ತೀರಿ ಎಂದು ಗುಡುಗಿದರು. ಇಲ್ಲಿ ಕಾರ್ಯಕ್ರಮ ನಡೆಸಲು ನಾವು ಅನುಮತಿಯೇ ನೀಡಿಲ್ಲ ಸಾರ್ ಎಂದು ಇನ್ಸ್ಪೆಕ್ಟರ್ ನುಣುಚಿಕೊಂಡರು.
ಸಂಘಟಕರು ಸಾಂಗ್ಲಿಯಾನಾರನ್ನು ಪರಿಪರಿಯಾಗಿ ಮನವೊಲಿಸಿದರೂ ಸಾಂಗ್ಲಿಯಾನಾ ಮೆತ್ತಗಾಗಲಿಲ್ಲ. ಪತ್ರಿಕಾ ಚಳವಳಿಯ ಅಧ್ಯಕ್ಷ ಬಸವರಾಜ್ ದೊಡ್ಡಮನಿ ಅವರ ಮಾತಿಗೂ ಕಿವಿಕೊಡದ ಸಾಂಗ್ಲಿಯಾನಾ ಕಾರು ತಿರುಗಿಸಿಕೊಂಡು ಹೊರಟು ಹೋದರು. ಪತ್ರಿಕಾ ಚಳವಳಿ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಪತ್ರಿಕಾ ಅಕಾಡೆಮಿ ಅಧ್ಯಕ್ಷ ಅರ್ಜುನ್ದೇವ್ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಸಾಂಗ್ಲಿಯಾನಾ ವಾಚ್