ಕ್ರಿಕೆಟ್ : ಗಾಯಾಳುಗಳಾಗಿದ್ದ ದಿಗ್ಗಜರ ಪುನರಾಗಮನ
ಮುಂಬಯಿ: ಗಾಯಾಳುಗಳಾಗಿದ್ದ ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್, ಆಶಿಶ್ ನೆಹ್ರ ಹಾಗೂ ಜಾವಗಲ್ ಶ್ರೀನಾಥ್ ಸೆಪ್ಟೆಂಬರ್ 24ಕ್ಕೆ ದಕ್ಷಿಣ ಆಫ್ರಿಕ ಪ್ರವಾಸಕ್ಕೆ ಹೋಗಲಿರುವ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವುದರ ಮೂಲಕ ಭಾರತ ಕ್ರಿಕೆಟ್ ಪಾಳಯದಲ್ಲಿ ಕುಂದಿಹೋಗಿದ್ದ ಆತ್ಮವಿಶ್ವಾಸ ಮರಳಿದಂತಾಗಿದೆ.
ಶ್ರೀಲಂಕಾ ಪ್ರವಾಸದಲ್ಲಿ ತಡಕಾಡಿದ ಸಮೀರ್ ದಿಘ, ಹೇಮಾಂಗ್ ಬದಾನಿ, ಅಮಯ್ ಖುರಾಸಿಯಾ, ಅಜಿತ್ ಅಗರ್ಕರ್ ಹಾಗೂ ಆಡಲು ಅವಕಾಶವನ್ನೇ ಗಳಿಸದ ರಾಹುಲ್ ಸಾಂಘ್ವಿಗೆ ತಂಡದಿಂದ ಕೊಕ್ ನೀಡಲಾಗಿದೆ. ದೀಪ್ ದಾಸ್ ಗುಪ್ತಾ ಎಂಬ ಹೊಸಬನನ್ನು ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡುವುದರ ಮೂಲಕ ವಿಜಯ್ ದಾಹಿಯಾ ಕೆರಿಯರ್ರಿಗೂ ಕೊಡಲಿ ಪೆಟ್ಟು ಬೀಳುವ ಸೂಚನೆಗಳು ಹೊರಬಿದ್ದಿವೆ. ಶಿವಸುಂದರ್ ದಾಸ್ ಅವರನ್ನು ಸೀಮಿತ ಓವರ್ಗಳ ಪಂದ್ಯಕ್ಕೂ ಆರಿಸಿರುವುದು ಚಂದೂ ಬೋರ್ಡೆ ನೇತೃತ್ವದ ಆಯ್ಕೆ ಸಮಿತಿ ಕೊನೆಗೂ ಎಚ್ಚೆತ್ತುಕೊಂಡಿದೆ ಎಂಬುದಕ್ಕೆ ನಿದರ್ಶನವಾಗಿದೆ.
ದಕ್ಷಿಣ ಆಫ್ರಿಕದಲ್ಲಿ ನಡೆಯಲಿರುವ ಒಂದು ದಿನದ ಪಂದ್ಯಗಳಿಗಾಗಿ ಮಾತ್ರ ತಂಡವನ್ನು ಆರಿಸಲಾಗಿದ್ದು, ಟೆಸ್ಟ್ ಪಂದ್ಯಗಳಿಗೆ ಆಯ್ಕೆಯಲ್ಲಿ ಬದಲಾವಣೆಗಳೂ ಆಗುವ ಸಾಧ್ಯತೆಯಿದೆ. ಕೇವಲ ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಆಡುವುದಾಗಿ ಹೇಳಿದ್ದ ಶ್ರೀನಾಥ್ ಅವರೊಡನೆ ಜಾನ್ ರೈಟ್ ಮಾತನಾಡಿದ ಪರಿಣಾಮ ತಮ್ಮ ನಿಲುವನ್ನು ಅವರು ಬದಲಿಸಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯವಂತ ಲೆಲೆ ತಿಳಿಸಿದರು.
ಜಾಹಿರ್ ಖಾನ್, ವೆಂಕಟೇಶ್ ಪ್ರಸಾದ್, ನೆಹ್ರಾ ಹಾಗೂ ಶ್ರೀನಾಥ್ ನಾಲ್ಕು ವೇಗಿಗಳ ಸ್ಥಾನ ತುಂಬಲು ಸಮರ್ಥರಾಗಿರುವ ಕಾರಣ ಅಗರ್ಕರ್ಗೆ ಕೊಕ್ ನೀಡಿದೆವು. ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ಎಸ್ ಎಸ್ ದಾಸ್ ಹಾಗೂ ವೀರೇಂದ್ರ ಶೆವಾಗ್- ಇವರಲ್ಲಿ ಎಲ್ಲರಿಗೂ ಬ್ಯಾಟಿಂಗ್ ಪ್ರಾರಂಭಿಸುವ ಸಾಮರ್ಥ್ಯವಿದೆ. ದಾಸ್ ಫಾರ್ಮ್ನಲ್ಲಿ ಇರುವುದರಿಂದ ಅವರ ಆಯ್ಕೆಗೆ ಯಾವುದೇ ತಕರಾರು ಬರಲಿಲ್ಲ. ಹರ್ಭಜನ್ಗೆ ಕುಂಬ್ಳೆ ಸಾಥಿ ಸಿಗುವುದರಿಂದ ಸ್ಪಿನ್ ದಾಳಿ ಬಿಗುವಾಗಲಿದೆ. ದೀಪ್ ದಾಸ್ ಗುಪ್ತ ಬ್ಯಾಟ್ಸ್ಮನ್ ರೂಪದಲ್ಲಿ ದಿಘ ಅವರನ್ನು ಮೀರಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಶುಕ್ರವಾರ ತಂಡವನ್ನು ಆರಿಸಿದ ನಂತರ ಬೋರ್ಡೆ ಹೇಳಿದರು.
ತಂಡ ಹೀಗಿದೆ : ಸೌರವ್ ಗಂಗೂಲಿ (ನಾಯಕ), ರಾಹುಲ್ ದ್ರಾವಿಡ್ (ಉಪ ನಾಯಕ), ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ಶಿವಸುಂದರ್ ದಾಸ್, ಯುವರಾಜ್ ಸಿಂಗ್, ವೀರೇಂದ್ರ ಶೆವಾಗ್, ದೀಪ್ ದಾಸ್ ಗುಪ್ತ (ವಿಕೆಟ್ ಕೀಪರ್), ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್, ಜಾವಗಲ್ ಶ್ರೀನಾಥ್, ಜಾಹಿರ್ ಖಾನ್, ಆಶಿಶ್ ನೆಹ್ರ, ವೆಂಕಟೇಶ್ ಪ್ರಸಾದ್ ಹಾಗೂ ರಿತಿಂದರ್ ಸಿಂಗ್ ಸೋಧಿ.
(ಏಜೆನ್ಸೀಸ್)