ಬೆತ್ತಲೆ ಮೆರವಣಿಗೆ ಪ್ರಕರಣ : ಸೆ. 7ರಂದು ಕೃಷ್ಣ ನಿವಾಸದೆದುರು ಧರಣಿ
ಬಳ್ಳಾರಿ : ವಣೆನೂರು ಗ್ರಾಮದಲ್ಲಿ ನಡೆದ ದಲಿತ ಮಹಿಳೆಯ ಅಮಾನವೀಯ ಬೆತ್ತಲೆ ಮೆರವಣಿಗೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಲು ಸೆ. 7ರಂದು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿವಾಸದ ಎದುರು ಧರಣಿ ನಡೆಸಲು ಜನವಾದಿ ಮಹಿಳಾ ಸಂಘಟನೆ ನಿರ್ಧರಿಸಿದೆ.
ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ, ಹೈಕೋರ್ಟ್ ನ್ಯಾಯಾಧೀಶರೊಬ್ಬರಿಂದ ವಿಚಾರಣೆ ನಡೆಸಬೇಕು ಎಂದು ಸಂಘಟನೆಯ ರಾಜ್ಯಾಧ್ಯಕ್ಷೆ ಕೆ. ನೀಲಾ ಆಗ್ರಹಿಸಿದ್ದಾರೆ. ಇಂತಹ ಘೋರ ಕೃತ್ಯ ಎಸಗಿದವರಿಗೆ ಉಗ್ರ ಶಿಕ್ಷೆ ವಿಧಿಸಬೇಕು. ಪೊಲೀಸರು ಇದನ್ನು ಒಂದು ಸಾಮಾನ್ಯ ಪ್ರಕರಣದಂತೆ ದಾಖಲಿಸಿ, ಆರೋಪಿಗಳು ಜಾಮೀನು ಪಡೆಯಲು ನೆರವಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಪ್ರತಿಭಟನೆ : ಮಹಿಳೆಯ ಬೆತ್ತಲೆ ಮೆರವಣಿಗೆ ಖಂಡಿಸಿ ಮಾರ್ಕ್ಸ್ವಾದಿ ಕಮ್ಯೂನಿಸ್ಟ್ ಪಕ್ಷವು ಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಏರ್ಪಡಿಸಿತ್ತು. ಈ ಮಧ್ಯೆ ದಲಿತ ಸಂಘರ್ಷ ಸಮಿತಿ ಎರ್ರೆಮ್ಮಳ ಬೆತ್ತಲೆ ಮೆರವಣಿಗೆ ಖಂಡಿಸಿ ಕರೆ ನೀಡಿದ್ದ ಗುಲ್ಬರ್ಗಾ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸೋಮವಾರ ಗುಲ್ಬರ್ಗಾದ ಹಲವು ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ವಾಹನ ಸಂಚಾರವೂ ವಿರಳವಾಗಿತ್ತು. ಈ ಮಧ್ಯೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಆಮರಣ ಉಪವಾಸ ಮುಷ್ಕರ ನಡೆಸುತ್ತಿದ್ದ ನಾಲ್ಕು ಮಂದಿ ತೀವ್ರ ಅಸ್ವಸ್ಥಗೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.
ಮುಖಪುಟ / ಇವತ್ತು... ಈ ಹೊತ್ತು...