ನಡುಹಗಲು ನಡುರಸ್ತೆಯಲ್ಲಿ ಚಾಕು ತೋರಿಸಿ 3 ಲಕ್ಷ ರು.ದರೋಡೆ
ಬೆಂಗಳೂರು : ಗಾಂಧಿಬಜಾರ್ನಲ್ಲಿ ಬಟ್ಟೆ ಅಂಗಡಿಯನ್ನು ಬಾಡಿಗೆಗೆ ಪಡೆಯುವ ಸಲುವಾಗಿ ಬೈಕ್ನಲ್ಲಿ ತೆರಳುತ್ತಿದ್ದ ಅಪ್ಪ್ಪ ಮಗನನ್ನು ಅಡ್ಡಗಟ್ಟಿರುವ ದುಷ್ಕರ್ಮಿಗಳು, ಚಾಕು ತೋರಿಸಿ ಮೂರು ಲಕ್ಷ ರುಪಾಯಿಗಳನ್ನು ನಡುಹಗಲಲ್ಲೇ ದೋಚಿರುವ ಘಟನೆ ನಗರದಲ್ಲಿ ಭಾನುವಾರ ವರದಿಯಾಗಿದೆ.
ವಿಜಯನಗರದ ಕೆಜಿಎಸ್ ಕಾಲೊನಿಯ ನಿವಾಸಿ ರತಿಲಾಲ್ ಡಿಷಾ ಅವರು ತಮ್ಮ ಪುತ್ರ ಪುರಾಷ್ ಷಾ ಜೊತೆ ಬೈಕ್ನಲ್ಲಿ ತೆರಳುತ್ತಿದ್ದಾಗ ಹಳೇಗುಡ್ಡದಹಳ್ಳಿ ಸಮೀಪ ಈ ದುರ್ಘಟನೆ ಸಂಭವಿಸಿದೆ. ದರೋಡೆಕೋರರ ಹಠಾತ್ ದಾಳಿಯಿಂದ ತೀವ್ರ ಆಘಾತಗೊಂಡ ರತಿಲಾಲ್ ಅವರು ಹೃದಯಾಘಾತಕ್ಕೀಡಾಗಿ ಸ್ಥಳದಲ್ಲಿಯೇ ಕುಸಿದುಬಿದ್ದರು. ಅವರನ್ನು ಸಮೀಪದ ಆಸ್ಪತ್ರಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಟ್ಟೆ ಅಂಗಡಿ ತೆರೆಯಲು, ಗಾಂಧಿಬಜಾರ್ನಲ್ಲಿ ಅಂಗಡಿಯನ್ನು ಬಾಡಿಗೆಗೆ ಪಡೆಯುವ ಸಲುವಾಗಿ ರತಿಲಾಲ್ ಅವರು ಹಣ ಒಯ್ಯುತ್ತಿದ್ದರು ಎನ್ನಲಾಗಿದೆ. ಜೆಪಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
(ಇನ್ಫೋ ವಾರ್ತೆ)