ಆ.12 : ಬೆಂಗಳೂರಿನಲ್ಲಿ ಏಷ್ಯಾ ಪೆಸಿಫಿಕ್ ಉದ್ಯಮಿಗಳ ಮೇಳ
ಹೈದರಾಬಾದ್ : ಏಷ್ಯಾ ಪೆಸಿಫಿಕ್ ಉದ್ಯಮಿಗಳ ಸಮ್ಮೇಳನ ಆಗಸ್ಟ್ 12ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದ್ದು, ಏಷ್ಯಾ ಪೆಸಿಫಿಕ್ ಪ್ರದೇಶದ ಸುಮಾರು 400 ಮಂದಿ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಹೈದರಾಬಾದ್ - ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಪ್ರತಿನಿಧಿ ಎಸ್. ಎಸ್. ಪಾಟೀಲ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ರಾಜ್ಯ ವಾಣಿಜ್ಯ ಮಂಡಳಿ ಮತ್ತು ಕರ್ನಾಟಕ ರಾಜ್ಯ ಸರಕಾರದ ಸಹ ಪ್ರಾಯೋಜಕತ್ವದಲ್ಲಿ ನಡೆಯುವ ಈ ಸಮಾವೇಶದಲ್ಲಿ ಬಂಡವಾಳ ಹೂಡುವಿಕೆ, ವ್ಯಾಪಾರ, ತಂತ್ರಜ್ಞಾನ ವ್ಯವಹಾರಗಳ ಬಗೆಗೆ ಚರ್ಚಿಸಲಾಗುವುದು. ಕೃಷಿ ಕ್ಷೇತ್ರ ಮತ್ತು ಮಾಹಿತಿ ತಂತ್ರಜ್ಞಾನ ವಿಷಯಗಳ ಚರ್ಚೆಗೆ ಹೆಚ್ಚು ಒತ್ತು ಕೊಡಲಾಗುವುದು.
ಉಪರಾಷ್ಟ್ರಪತಿ ಕೃಷ್ಣಕಾಂತ್ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಸಾರ್ಕ್ ಪ್ರಧಾನ ಕಾರ್ಯದರ್ಶಿ ನಿಹಾಲ್ ರೋಡ್ರಿಗೋ, ವಿದೇಶಾಂಗ ವ್ಯವಹಾರಗಳ ಸಚಿವ ಜಸ್ವಂತ್ ಸಿಂಗ್, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಮುರಸೋಳಿ ಮಾರನ್ ಸಮಾವೇಶದಲ್ಲಿ ಭಾಗವಹಿಸುವರು.
ಆಸ್ಟ್ರೇಲಿಯಾ, ಬಾಂಗ್ಲಾದೇಶ, ಭೂತಾನ್, ಚೈನಾ, ಜರ್ಮನಿ, ಹಾಂಗ್ಕಾಂಗ್, ಇಂಡೋನೇಷ್ಯಾ, ಜಪಾನ್, ಮಲೇಶಿಯಾ, ಮಾಲ್ಡಿವ್ಸ್, ಮಾಯನ್ಮಾರ್, ನೇಪಾಳ, ನ್ಯೂರಿkುಲ್ಯಾಂಡ್, ಪಾಕಿಸ್ತಾನ, ಪಿಲಿಪ್ಪೈನ್ಸ್, ಸಿಂಗಪೂರ್, ದಕ್ಷಿಣ ಕೊರಿಯಾ, ಶ್ರೀಲಂಕಾ , ತೈವಾನ್ , ವಿಯೆಟ್ನಾಂ ಮುಂತಾದ ದೇಶಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸುವರು.
(ಯುಎನ್ಐ)