ಸುವರ್ಣಾವತಿ ಜಲಾಶಯದಲ್ಲಿ ಕಾಣಿಸಿಕೊಂಡ ಚೆನ್ನಂಗೇಶ್ವರ ದೇಗುಲ
ಚಾಮರಾಜನಗರ : ಮೊನ್ನೆಯಷ್ಟೇ ನೀರು ಕಡಿಮೆಯಾಗಿ ಕನ್ನಂಬಾಡಿಯಲ್ಲಿ ತಲೆಯೆತ್ತಿದ್ದ ವೇಣುಗೋಪಾಲ ಮರು ಜಲ ಸಮಾಧಿ ಆದುದನ್ನು ಮರೆಯುವ ಮುನ್ನವೇ- ಮತ್ತೊಂದು ದೇವಸ್ಥಾನ ನೀರಿನಿಂದ ಹೊರಬಿದ್ದಿದೆ. ಚಾಮರಾಜನಗರ ಜಿಲ್ಲೆಯ ಸುವರ್ಣಾವತಿ ಜಲಾಶಯದಲ್ಲಿ ದೇವಾಲಯವೊಂದು ಕಾಣಿಸಿಕೊಂಡಿದ್ದು , ಗಡಿ ಭಾಗದ ಜನರನ್ನು ಆಕರ್ಷಿಸುತ್ತಿದೆ. ಎಲ್ಲವೂ ಮಳೆರಾಯನ ಕೃಪೆ!
ಸುವರ್ಣಾವತಿ ಜಲಾಶಯದಿಂದ ಹೊರಬಿದ್ದಿರುವ ದೇವಾಲಯವನ್ನು ಚೆನ್ನಂಜೇಶ್ವರ ದೇವಸ್ಥಾನ ಎಂದು ಗುರ್ತಿಸಲಾಗಿದೆ. ಮಲೆ ಮಹದೇಶ್ವರ ಸ್ವಾಮಿಯ ಸಂಬಂಧಿಕರಾದ ಚೆನ್ನಂಗೇಶ್ವರ ಎನ್ನುವ ಜಂಗಮ ಇಲ್ಲಿ ನೆಲೆಸಿದ್ದ ಎನ್ನುವ ಕಥೆ ಸ್ಥಳಪುರಾಣಕ್ಕೆ ಅಂಟಿಕೊಂಡಿದ್ದು , ಮೂರು ಶತಮಾನಗಳ ಹಿಂದೆಯೇ ಚೆನ್ನಂಗೇಶ್ವರ ದೇವಾಲಯ ನಿರ್ಮಾಣವಾಗಿತ್ತು ಎಂದು ನಂಬಲಾಗಿದೆ.
ಮೂರೂವರೆ ದಶಕದ ನಂತರ ಕಾಣಿಸಿಕೊಂಡ ಚೆನ್ನಂಗೇಶ್ವರ
ಸುವರ್ಣಾವತಿ ನದಿಗೆ ಅಡ್ಡವಾಗಿ ಜಲಾಶಯ ಕಟ್ಟಿದಾಗ ಒಂದೊಮ್ಮೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಚೆನ್ನಂಗೇಶ್ವರ ದೇವಸ್ಥಾನ ಹಿನ್ನೀರಿನಲ್ಲಿ ಮುಳುಗಡೆಯಾಯಿತು. ಮುಳುಗಡೆಯಾದ ಮೂರೂವರೆ ದಶಕಗಳ ನಂತರ ಇದೇ ಮೊದಲ ಬಾರಿಗೆ ದೇವಸ್ಥಾನ ಮತ್ತೆ ಕಾಣಿಸಿಕೊಂಡಿದೆ.
ಎರಡು ಗೋಪುರ, ಮುಂಭಾಗದ ವಿಶಾಲ ಪ್ರಾಂಗಣ, ಹಾಗೂ ಮೇಲ್ಭಾಗದಲ್ಲಿ ಬಸವ ಮತ್ತಿತರ ಮೂರ್ತಿಗಳ ಕೆತ್ತನೆಗಳನ್ನು ಒಳಗೊಂಡಿರುವ ಚೆನ್ನಂಗೇಶ್ವರ ದೇವಸ್ಥಾನ ದ್ರಾವಿಡ ವಾಸ್ತುಶಿಲ್ಪವನ್ನು ಹೊಂದಿದೆ. ದೇವಾಲಯವನ್ನು ಯಾರು ನಿರ್ಮಾಣ ಮಾಡಿದರು ಎನ್ನುವ ಬಗೆಗೆ ಮಾಹಿತಿಗಳು ಲಭ್ಯವಾಗಿಲ್ಲ . ಸುಮಾರು 35 ವರ್ಷಗಳ ಕಾಲ ನೀರಿನಲ್ಲಿಯೇ ಮುಳುಗಿದ್ದರೂ, ಸುಣ್ಣ, ಗಾರೆಗಳಿಂದ ನಿರ್ಮಿಸಿರುವ ದೇವಸ್ಥಾನಕ್ಕೆ ಯಾವುದೇ ಹಾನಿಯಾಗಿಲ್ಲ .
ಜಲಾಶಯ ನಿರ್ಮಾಣ ಕಾಲದಲ್ಲಿ ಅಟ್ಟುಗುಳಿಪುರದಲ್ಲಿ ನೂತನ ದೇವಾಲಯವನ್ನು ಸರ್ಕಾರ ನಿರ್ಮಿಸಿದ್ದರೂ, ಚೆನ್ನಂಗೇಶ್ವರನ ಉದ್ಭವ ಲಿಂಗ ಎಂದು ಹೇಳಲಾಗುತ್ತಿರುವ ಮೂಲ ಲಿಂಗ ಜಲಾಶಯದಲ್ಲಿನ ದೇವಸ್ಥಾನದಲ್ಲಿಯೇ ಉಳಿದಿದೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...