ವಾಜಪೇಯಿ ಪಾಕಿಸ್ತಾನಕ್ಕೆ ಹೋದರೆ, ದೇಶ ತಿರುಗಿ ಬಿದ್ದೀತು- ಠಾಕ್ರೆ
ಮುಂಬೈ : ವಾಜಪೇಯಿ ಮುಷರ್ರಫ್ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಇದು ಕಾಣುತ್ತಿರುವಷ್ಟು ಸರಳವಾದ ವಿಷಯವಲ್ಲ. ಒಂದು ವೇಳೆ ಪ್ರಧಾನಿ ವಾಜಪೇಯಿ ಪಾಕಿಸ್ತಾನಕ್ಕೆ ಮತ್ತೊಂದು ಶೃಂಗಸಭೆಗಾಗಿ ಹೋದಲ್ಲಿ ಅವರಿಗೆ ರಾಷ್ಟ್ರೀಯ ಬೆಂಬಲ ಇಲ್ಲವಾಗಲಿದೆ ಎಂದು ಶಿವಸೇನೆ ನಾಯಕ ಬಾಳ್ ಠಾಕ್ರೆ ಎಚ್ಚರ ಕೊಟ್ಟಿದ್ದಾರೆ.
ಆಗ್ರಾ ಶೃಂಗಸಭೆ ಯಾವುದೇ ಒಪ್ಪಂದವಾಗದೇ ಮುಗಿದಿದೆ. ಪಾಕಿಸ್ತಾನ ಕಾಶ್ಮೀರಕ್ಕೆ ಭಯೋತ್ಪಾದಕರನ್ನು ಕಳುಹಿಸಿ, ಕ್ರೌರ್ಯ ಮೆರೆಯುವುದು ಮುಂದುವರೆದಿದೆ. ಇಂಥಾ ಹಿನ್ನೆಲೆಯಲ್ಲಿ ವಾಜಪೇಯಿ ಇಸ್ಲಾಮಾಬಾದ್ಗೆ ಹೋದಲ್ಲಿ, ದೇಶ ಅವರ ವಿರುದ್ಧ ದನಿಯೆತ್ತಲಿದೆ ಎಂದು ತಮ್ಮ ಪಕ್ಷದ ಸಾಮ್ನಾ ದೈನಿಕದ ಬುಧವಾರದ ಸಂಚಿಕೆಯಲ್ಲಿ ಠಾಕ್ರೆ ಬರೆದಿದ್ದಾರೆ.
ಕಾಶ್ಮೀರದ ಭಯೋತ್ಪಾದಕ ಕೃತ್ಯಗಳನ್ನು ಮುಷರ್ರಫ್ ಪವಿತ್ರ ಯುದ್ಧ ಎಂದು ಬಣ್ಣಿಸಿದರು. ಕಾಶ್ಮೀರ ಸಮಸ್ಯೆ ಬಗೆಹರಿಯುವುದಲ್ಲ ಎಂಬುದಕ್ಕೆ ಪಾಕಿಸ್ತಾನದ ಈ ಕಟು ನಿಲುವೇ ಸಾಕು. ಆಗ್ರಾ ಶೃಂಗಸಭೆ ಅರ್ಥವಿಲ್ಲದ್ದು. ಅದರಿಂದ ಯಾವುದೇ ಫಲವಿಲ್ಲ ಎಂಬುದು ನನಗೆ ಮೊದಲೇ ಗೊತ್ತಿತ್ತು ಎಂದು ಎನ್ಡಿಎ ಮೈತ್ರಿ ಕೂಟದ ಪಕ್ಷಗಳಲ್ಲೊಂದಾದ ಶಿವಸೇನೆಯ ಮುಖ್ಯಸ್ಥ ಬಾಳ್ ಠಾಕ್ರೆ ಉಲ್ಲೇಖಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಆಗ್ರಾ ಶೃಂಗಸಭೆ