ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರ ವಿರುದ್ಧ ಸುಪ್ರೀಂಕೋರ್ಟ್‌ಗೆ : ರಾಜ್ಯದ ನಿರ್ಧಾರ ಅಚಲ

By Staff
|
Google Oneindia Kannada News

* ಇಮ್ರಾನ್‌ ಖುರೇಷಿ

ಬೆಂಗಳೂರು: ಕೃಷ್ಣ ನದಿ ಕಣಿವೆಯಲ್ಲಿ ಯಾವುದೇ ನೀರಾವರಿ ಯೋಜನೆಗೆ ಅನುಮತಿ ನೀಡಿಲ್ಲ ಎಂಬ ಕೇಂದ್ರದ ಸಮಜಾಯಿಷಿಯ ನಂತರವೂ ಆಂಧ್ರದ ಅಕ್ರಮ ನೀರಾವರಿ ಕಾಮಗಾರಿ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವ ಕರ್ನಾಟಕ ರಾಜ್ಯದ ನಿಲುವು ಬದಲಾಗಿಲ್ಲ.

ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಎಂ.ಬಿ. ನವಲ್‌ವಾಲಾ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ ಥೆರೇಸಾ ಭಟ್ಟಾಚಾರ್ಯ ಅವರಿಗೆ ಪತ್ರ ಬರೆದಿದ್ದು, ಕೃಷ್ಣ ನದಿ ಕೊಳ್ಳದಲ್ಲಿ ಆಂಧ್ರದ ಮೂರು ನೀರಾವರಿ ಯೋಜನೆಗಳಿಗೆ ಸಚಿವಾಲಯವು ಯಾವುದೇ ಸಮ್ಮತಿ ನೀಡಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಕರ್ನಾಟಕ ರಾಜ್ಯದಿಂದ ಆಕ್ಷೇಪ ಇದ್ದಾಗ್ಯೂ ಆಂಧ್ರಪ್ರದೇಶಕ್ಕೆ ಮೂರು ನೀರಾವರಿ ಕಾಮಗಾರಿ ಕೈಗೊಳ್ಳಲು ಅನುಮತಿಸಲಾಗಿರುವ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಕೃಷ್ಣ ಅವರು ಪ್ರಧಾನಿ ವಾಜಪೇಯಿ ಅವರಿಗೆ ಜೂನ್‌ 24ರಂದು ಬರೆದಿದ್ದ ಪತ್ರಕ್ಕೆ ಸಂಬಂಧಿಸಿದಂತೆ ನವಲ್‌ವಾಲಿಯಾ ಸಚಿವಾಲಯದ ಪರವಾಗಿ ಈ ಸ್ಪಷ್ಟೀಕರಣ ನೀಡಿದ್ದಾರೆ. ಶ್ರೀಶೈಲ ಬಲದಂಡೆ ನಾಲೆ, ಭೀಮಾ ಎಡದಂಡೆ ನೀರಾವರಿ ಯೋಜನೆ ಮತ್ತು ಪುಲಿಚಿಂತಲ ಯೋಜನೆಗಳ ಸಂಬಂಧ ರಾಜ್ಯ ತಕರಾರು ಸಲ್ಲಿಸಿದೆ.

ಆದಾಗ್ಯೂ ಆಂಧ್ರ ಸರಕಾರ ಶಾಶ್ವತ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಕೈಗೊಂಡಿದೆ. ಅಕ್ರಮವಾಗಿ ಫೀಡರ್‌ ಕಾಲುವೆಗಳನ್ನು ನಿರ್ಮಿಸುತ್ತಿದೆ. ಈ ಸಂಬಂಧ ಕಾಮಗಾರಿ ನಿಲ್ಲಿಸುವಂತೆ ನಿರ್ದೇಶನ ಕೋರಿ ರಾಜ್ಯ ಸರಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಿದೆ. ನಾವು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗೇ ಹೋಗುತ್ತೇವೆ ಎಂದು ರಾಜ್ಯದ ನೀರಾವರಿ ಇಲಾಖೆ ಕಾರ್ಯದರ್ಶಿ ಎಸ್‌.ಜೆ. ಚನ್ನಬಸಪ್ಪ ಅವರು ತಿಳಿಸಿದ್ದಾರೆ.

ಶ್ರೀಶೈಲ ಯೋಜನೆಗೆ ಯೋಜನಾ ಆಯೋಗ 1981ರಲ್ಲಿಯೇ ಹಣ ವಿನಿಯೋಗ ಅನುಮತಿ ನೀಡಿತ್ತು. ಪುಲಿಂಚಲ ಮತ್ತು ಭೀಮಾ ಎಡದಂಡೆ ಯೋಜನೆಗಳ ಪ್ರಸ್ತಾವಕ್ಕೆ 1996ರಲ್ಲಿ ಅನುಮತಿ ನೀಡಲಾಗಿತ್ತು. ಆದರೆ ಈ ಎಲ್ಲ ಯೋಜನಾ ಅನುಮತಿಗಳು ನಿಬಂಧನೆಗಳಿಗೊಳಪಟ್ಟಿವೆ ಎಂದು ಸ್ಪಷ್ಟಪಡಿಸಲಾಗಿದೆ. ಮೂರೂ ಯೋಜನೆಗಳು ಯೋಜನಾ ಆಯೋಗದಿಂದ ಅಂತಿಮ ಅನುಮತಿ ಪಡೆದಿಲ್ಲ ಎಂದು ತಾವು ಹೇಳಿದ್ದನ್ನು ಪತ್ರಿಕೆಗಳು ತಪ್ಪಾಗಿ ವರದಿ ಮಾಡಿವೆ ಎಂದೂ ನವಲ್‌ವಾಲಾ ಅವರು ರಾಜ್ಯಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

(ಐ.ಎ.ಎನ್‌.ಎಸ್‌.)

ಮುಖಪುಟ / ಇವತ್ತು... ಈ ಹೊತ್ತು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X