ಏಡ್ಸ್ ತಡೆಗಟ್ಟುವಲ್ಲಿ ಬಂಡೆಗಲ್ಲಾಗಿರುವ ಬೋಗಸ್ ವೈದ್ಯರು
ಗುವಾಹಟಿ : ದೇಶದಲ್ಲಿ ಏಡ್ಸನ್ನು ಆರಂಭಿಕ ಹಂತದಲ್ಲೇ ಕಂಡು ಹಿಡಿಯಲು ಇರುವ ದೊಡ್ಡ ತೊಡಕು ಬೋಗಸ್ ವೈದ್ಯರು. ಏಡ್ಸ್ ಕಾರ್ಯಕರ್ತರು ಶುಕ್ರವಾರ ಈ ವಿಷಯ ಸ್ಪಷ್ಟಪಡಿಸಿದ್ದಾರೆ.
ಏಡ್ಸ್ ಹೊಂದಿರುವ ಬಹುತೇಕ ಲೈಂಗಿಕ ಕಾರ್ಯಕರ್ತರು ಮೊದಲು ಹೋಗುವುದು ಅಳಲೆಕಾಯಿ ಪಂಡಿತರ ಬಳಿಗೆ ಅಥವಾ ಯಬಡೇಶಿ ವೈದ್ಯರಲ್ಲಿಗೆ. ದೇಶದ ಪೂರ್ವ ಹಾಗೂ ಉತ್ತರ ಭಾಗದ ಏಳು ರಾಜ್ಯಗಳಲ್ಲಿ ಕನಿಷ್ಠ 50 ಸಾವಿರ ಮಂದಿಗೆ ಎಚ್ಐವಿ ಸೋಂಕಿದೆ. ಹೆರಾಯಿನ್ ಉತ್ಪಾದಿಸುವ ಥೈಲ್ಯಾಂಡ್-ಲಾಓಸ್- ಮಯನ್ಮಾರ್ನ ಗೋಲ್ಡನ್ ಟ್ರಯಾಂಗಲ್ನ ಗಡಿಯಲ್ಲಿರುವ ರಾಜ್ಯಗಳ ಸುಮಾರು 25 ಸಾವಿರ ಮಂದಿಗೆ ಮಾದಕ ದ್ರವ್ಯವನ್ನು ತೆಗೆದುಕೊಳ್ಳಲು ಬಳಸುವ ಚುಚ್ಚುಮದ್ದಿನಿಂದಾಗಿ ಏಡ್ಸ್ ಸೋಂಕು ತಗುಲಿದೆ ಎನ್ನುತ್ತಾರೆ ಅಸ್ಸಾಂನ ಏಡ್ಸ್ ತಡೆಗಟ್ಟುವಿಕೆ ಸಮಾಜದ ಅಧ್ಯಕ್ಷ ಎಸ್.ಐ.ಅಹ್ಮದ್.
ಏಡ್ಸ್ ಹೊಂದಿರುವ ಲಾರಿ ಚಾಲಕರ ಸಂಖ್ಯೆ ಏರಿದೆ : ಕರೆವೆಣ್ಣುಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಲಾರಿ ಚಾಲಕರಿಗೂ ಲೈಂಗಿಕ ಸಂಪರ್ಕದಿಂದ ಎಚ್ಐವಿ ಸೋಂಕು ಹರಡುವುದು ಹೆಚ್ಚಾಗಿದೆ. ಆದರೆ ಅವರು ವೈದ್ಯರಲ್ಲಿಗೆ ಹೋಗಲು ಸಂಕೋಚ ಅಡ್ಡಿಯಾಗುತ್ತಿದೆ. ಹೀಗಾಗಿ ಅವರು ಯಾವುದೋ ಬುರ್ನಾಸು ಪಂಡಿತನ ಬಳಿಗೆ ಹೋಗಿ, ಕತೆ ಹೇಳಿಕೊಂಡು, ಅವ ಕೊಡುವ ಚೂರ್ಣ ಜಗಿದು ಸುಮ್ಮನಾಗಿಬಿಡುತ್ತಾರೆ. ಇದು ಸರಿಯಲ್ಲ ಎಂಬುದು ಗವಾಹಟಿಯ ಪ್ರಸಿದ್ಧ ಏಡ್ಸ್ ಕೌನ್ಸಿಲರ್ ಚಿರಂಜೀಬ್ ಕಕೋಟಿ ಅಭಿಪ್ರಾಯ.
ಭಾರತದಲ್ಲಿ 3.5 ದಶಲಕ್ಷ ಮಂದಿ ಎಚ್ಐವಿ ಪಾಸಿಟಿವ್ ಹೊಂದಿದ್ದಾರೆ ಎಂದು ಸರ್ಕಾರದ ಅಧಿಕೃತ ವರದಿ ಹೇಳುತ್ತಿದೆ. ಆದರೆ ಈ ಪೈಕಿ ವೃತ್ತಿಪರ ವೈದ್ಯರಲ್ಲಿಗೆ ಧಾವಿಸುವ ಮಂದಿ ಬೆರಳೆಣಿಕೆಯಷ್ಟು. ಉಳಿದವರು ಬೋಗಸ್ ಡಾಕ್ಟರಿಗೆ ಫೀಸು ತೆತ್ತಿ, ಜೀವಕ್ಕೂ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಸರ್ಕಾರ ಈ ಬೋಗಸ್ ಡಾಕ್ಟರ ಎತ್ತಂಗಡಿ ಮಾಡಲು ಏನಾದರೂ ಮಾಡಲೇಬೇಕಾದ ಕಾಲ ಕಳೆದಾಗಿದೆ. ಏನೂ ಮಾಡಿಲ್ಲ ಅನ್ನುವುದೇ ದುರಂತ.
(ಎಎಫ್ಪಿ)