ಕರ್ನಾಟಕದ ಇಬ್ಬರು ವೇದ ಪಾರಂಗತರಿಗೆ ವೇದರತ್ನ ಪ್ರಶಸ್ತಿ
ಬೆಂಗಳೂರು : ಮೇ 18ರ ಶುಕ್ರವಾರ ನಗರದ ಭಾರತೀಯ ವಿದ್ಯಾಭವನವು ಮೈಸೂರಿನ ಜಿ.ಎನ್. ಚಕ್ರವರ್ತಿ, ಬೆಂಗಳೂರಿನ ಸುಧಾಕರ್ ಚತುರ್ವೇದಿ ಸೇರಿದಂತೆ ರಾಷ್ಟ್ರದ ಹೆಸರಾಂತ ವೇದ ಪಾರಂಗತರಿಗೆ ಶ್ರೀ ಗುರು ಗಂಗೇಶ್ವರಾನಂದ ವೇದರತ್ನ ಪುರಸ್ಕಾರ ನೀಡಿ ಗೌರವಿಸಲಿದೆ.
1995ರಲ್ಲಿ ಸ್ಥಾಪಿಸಲಾದ ಹಾಗೂ ಎರಡು ವರ್ಷಗಳಿಗೊಮ್ಮೆ ನೀಡುವ ಈ ಪುರಸ್ಕಾರಕ್ಕೆ (1999ರ ಸಾಲಿಗೆ) ಚೆನ್ನೈನ ಸುಬ್ರಹ್ಮಣ್ಯ ಗಣಪತಿಗಳು (ಋಗ್ವೇದ), ಚೆನ್ನೈನ ಪಂಚಪಕೇಶ ಶಾಸ್ತ್ರೀಗಳು (ಕೃಷ್ಣ ಯಜುರ್ವೇದ), ನಾಸಿಕ್ನ ಕೃಷ್ಣ ಶಾಸ್ತ್ರೀ ಕೆ ಗೊಡೇಶೆ (ಶುಕ್ಲ ಯಜುರ್ವೇದ), ವಾರಾಣಸಿಯ ದೇವಕೃಷ್ಣ ತ್ರಿಪಾಠಿ (ಸಾಮವೇದ), ವೇದ ಮತ್ತು ಸಂಸ್ಕೃತ ಪಂಡಿತರಾದ ಬೆಂಗಳೂರಿನ ಸುಧಾಕರ ಚತುರ್ವೇದಿ ಮತ್ತು ಮೈಸೂರಿನ ಜಿ.ಎನ್. ಚಕ್ರವರ್ತಿ ಅವರನ್ನು ಆಯ್ಕೆ ಮಾಡಲಾಗಿದೆ.
ಈ ವಿಷಯವನ್ನು ವಿದ್ಯಾಭವನದ ಬೆಂಗಳೂರು ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತೂರು ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ. ಈ ಬಾರಿ ಭೌತಶಾಸ್ತ್ರ, ರಾಸಾಯನ ಶಾಸ್ತ್ರ ಹಾಗೂ ಗಣಿತದಲ್ಲಿ ವೇದದ ಬಗ್ಗೆ ಸಂಶೋಧನೆ ನಡೆಸಿದ ಹಾಗೂ ಜೀವಿತಾವಧಿಯ ಸಾಧನೆಗಾಗಿ ಕೂಡ ವಿಶೇಷ ಪುರಸ್ಕಾರಗಳನ್ನು ನೀಡಲಾಗುತ್ತಿದೆ ಎಂದೂ ಅವರು ಹೇಳಿದರು.
ಪ್ರಶಸ್ತಿಯು ಸ್ವಾಮಿ ಗುರು ಗಂಗೇಶ್ವರಾನಂದರ ಪ್ರತಿಮೆ, ತಾಮ್ರಪತ್ರ ಹಾಗೂ ಒಂದು ಲಕ್ಷ ರುಪಾಯಿ ನಗದು ಬಹುಮಾನವನ್ನು ಒಳಗೊಂಡಿದೆ. ಇದೇ ದಿನ 1997ರ ಪ್ರಶಸ್ತಿ ಪುರಸ್ಕೃತರನ್ನೂ ಸನ್ಮಾನಿಸುವ ಕಾರ್ಯಕ್ರಮ ಇದೆ.
ಸನ್ಮಾನಿತರು : ಋಗ್ವೇದ - ವಿದ್ವಾನ್ ಶಂಬಾ ದೀಕ್ಷಿತ್ (ಅಗ್ನಿಶರಣಂ, ಗೋಕರ್ಣ), ಕೃಷ್ಣ ಯಜುರ್ವೇದ :ಎಲ್.ಎಂ. ಸುಬ್ರಹ್ಮಣ್ಯ ಗಣಾದಿಗಳು ( ಕಾಂಚೀಪುರಂ), ಶುಕ್ಲ ಯಜುರ್ವೇದ : ಇ.ಜೆ. ಕಮಾರಸ್ವಾಮಿ ದೀಕ್ಷಿತರು (ಚಕ್ರಮಲ್ಲೂರು, ತಮಿಳುನಾಡು), ಸಾಮವೇದ :ಡಾ. ವಿ. ವಿಶ್ವನಾಥ ಶರ್ಮ (ಚೆನ್ನೈ), ಸಂಸ್ಕೃತ :ಟಿ.ಎನ್. ಧರ್ಮಾಧಿಕಾರಿ, ಗಣಿತ ವೇದ :ಡಾ. ಎಸ್.ಕೆ. ಕಪೂರ್ (ಹರಿಯಾಣ).
ಈ ವರೆಗೆ ಈ ಪ್ರಶಸ್ತಿಯನ್ನು ತಮಿಳುನಾಡಿನ 6 ಪಂಡಿತರು ಹಾಗೂ ಕರ್ನಾಟಕದ ಮೂವರು ಪಡೆದಿದ್ದಾರೆ. ಮಹಾರಾಷ್ಟ್ರದ ಇಬ್ಬರು ಗಣ್ಯರು ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ ಎಂದೂ ಅವರು ವಿವರ ನೀಡಿದರು.