ಪ್ರಧಾನಿ ವಾಜಪೇಯಿ ಬಲ ಮೊಣಕಾಲಿಗೆಜೂನ್ನಲ್ಲಿ ಶಸ್ತ್ರ ಚಿಕಿತ್ಸೆ
ಬೆಂಗಳೂರು : ಜೂನ್ ತಿಂಗಳ ಮೊದಲ ವಾರದಲ್ಲಿ ಪ್ರಧಾನಿ ವಾಜಪೇಯಿ ಅವರ ಬಲ ಮೊಣಕಾಲಿನ ಶಸ್ತ್ರಚಿಕಿತ್ಸೆ ಮುಂಬಯಿಯಲ್ಲಿ ನಡೆಯಲಿದ್ದು , ಈ ಮೊದಲು ವಾಜಪೇಯಿ ಅವರ ಎಡ ಮೊಣಕಾಲಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದ ಅನಿವಾಸಿ ಭಾರತೀಯ ಡಾ. ಚಿತ್ತರಂಜನ್ ರಣಾವತ್ ಅವರೇ ಈ ಬಾರಿಯೂ ಶಸ್ತ್ರಚಿಕಿತ್ಸೆ ನೇತೃತ್ವ ವಹಿಸುವರು.
ಮಲೇಷಿಯಾ ಭೇಟಿಯ ನಂತರ ಬುಧವಾರ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ವಿಶೇಷ ವಿಮಾನದಲ್ಲಿಯೇ ಪ್ರಧಾನಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಎಡ ಮೊಣಕಾಲಿನ ಶಸ್ತ್ರಚಿಕಿತ್ಸೆಯನ್ನು ಮುಂಬಯಿಯ ಬ್ರೀಚ್ಕ್ಯಾಂಡಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿದ್ದ ಸಂದರ್ಭದಲ್ಲಿಯೇ, ಬಲ ಮೊಣಕಾಲಿನ ಶಸ್ತ್ರಚಿಕಿತ್ಸೆಯ ಅವಶ್ಯಕತೆಯಿದೆಯೆಂದು ವೈದ್ಯರು ಪ್ರಧಾನಿಗೆ ತಿಳಿಸಿದ್ದರು.
ಲೋಕಸಭೆ ಮಧ್ಯಂತರ ಚುನಾವಣೆ ಸಾಧ್ಯತೆಗಳಿಲ್ಲ
ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ರಾಷ್ಟ್ರೀಯ ಪ್ರಜಾ ಸತ್ತಾತ್ಮಕ ಒಕ್ಕೂಟ ಹಿನ್ನಡೆ ಅನುಭವಿಸಿದ ಹಿನ್ನೆಲೆಯಲ್ಲಿ ಲೋಕಸಭೆಗೆ ಮಧ್ಯಂತರ ಚುನಾವಣೆ ನಡೆಯುವ ಯಾವುದೇ ಸಾಧ್ಯತೆಗಳನ್ನು ಪ್ರಧಾನಿ ವಾಜಪೇಯಿ ಸ್ಪಷ್ಟವಾಗಿ ತಳ್ಳಿಹಾಕಿದರು.
ಪ್ರಸ್ತುತದ ಚುನಾವಣೆಯಲ್ಲಿ ತಮ್ಮ ಪಾಲಿಗೆ ಲಾಭ- ನಷ್ಟ ಅನ್ನುವಂತದ್ದೇನೂ ಇಲ್ಲ . ಇದೊಂದು ಮಿಶ್ರ ಫಲಿತಾಂಶ. ಒಂದೆರಡು ಕ್ಷೇತ್ರಗಳಲ್ಲಿ ಹೆಚ್ಚಿನ ಸಾಧನೆ ಮಾಡಿದ್ದೂ ಉಂಟು ಎಂದು ಪ್ರಧಾನಿ 5 ರಾಜ್ಯಗಳ ಚುನಾವಣಾ ಫಲಿತಾಂಶವನ್ನು ಬಣ್ಣಿಸಿದರು. ಬರುವ ವರ್ಷ ನಡೆಯುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಸ್ಪರ್ಧೆಗಾಗಿ ನಾವು ಸನ್ನದ್ಧರಾಗಿದ್ದೇವೆ ಎಂದು ಅವರು ಆತ್ಮವಿಶ್ವಾಸದ ಮಾತುಗಳನ್ನಾಡಿದರು.
(ಇನ್ಫೋ ವಾರ್ತೆ)