ಬಿಟ್ಟೂ ಬಿಡದೆ ದೆಹಲಿಯ ಕಾಡುತ್ತಿರುವ ‘ಮಂಗ ಮಾನವ’
ನವದೆಹಲಿ : ರಾಜಧಾನಿಯ ಜನತೆಯನ್ನು ಈಚಿನ ದಿನಗಳಲ್ಲಿ ಭೂತವಾಗಿ ಕಾಡುತ್ತಿರುವ ‘ಮಂಗ ಮಾನವ’ (ಮಂಕಿ ಮ್ಯಾನ್) ಬುಧವಾರ ರಾತ್ರಿ ಮತ್ತೆ ಕಾಣಿಸಿಕೊಂಡಿದ್ದು , ಕನಿಷ್ಠ 8 ಮಂದಿಯನ್ನು ಗಾಯಗೊಳಿಸಿದೆ.
ಗಾಯಗೊಂಡವರಲ್ಲಿ ಇಬ್ಬರು ಗಂಭೀರ ಗಾಯಗಳಿಂದ ಬಳಲುತ್ತಿದ್ದು , ಅವರ ದೇಹಸ್ಥಿತಿಯನ್ನು ವೈದ್ಯರು ಗಮನಿಸುತ್ತಿದ್ದಾರೆ. ಉಳಿದ ಆರು ಮಂದಿಯನ್ನು ಪ್ರಥಮ ಚಿಕಿತ್ಸೆಯ ನಂತರ ಮನೆಗೆ ಕಳುಹಿಸಲಾಯಿತು ಎಂದು ಗಾಯಾಳುಗಳಿಗೆ ಚಿಕಿತ್ಸೆ ನೀಡಿದ ಗುರುತೇಜ್ ಬಹದೂರ್ ಆಸ್ಪತ್ರೆಯ ವೈದ್ಯ ಡಾ. ಬನ್ಸಾರಿ ದಾಸ್ ಗೌತಮ್ ತಿಳಿಸಿದ್ದಾರೆ.
ಬುಧವಾರ ರಾತ್ರಿ ಎಂಟು ಜನರು ಗಾಯಗೊಂಡ ಬೆನ್ನಿಗೇ, ಮಂಗಮಾನವನ ರಹಸ್ಯವನ್ನು ಬೇಧಿಸಲು ದೆಹಲಿ ಪೊಲೀಸರು ತನಿಖಾ ದಳವೊಂದನ್ನು ರಚಿಸಿದ್ದಾರೆ. ವದಂತಿ ಹಾಗೂ ಬೆದರಿಕೆ ಕರೆಗಳನ್ನು ಮಾಡುವುದರಲ್ಲಿ ತೊಡಗಿರುವ ಕೆಲವರ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಪಡೆಗಳ ಸಹಾಯಕ್ಕೂ ದೆಹಲಿ ಪೊಲೀಸರು ಎಡತಾಕುತ್ತಿದ್ದಾರೆ.
ಮಂಗನ ಚೇಷ್ಟೆಯಾ, ಮಾನವನ ಕುತಂತ್ರವೋ ....
ರಾಜಧಾನಿಯ ಜನತೆಯ ಮನಸ್ಸಿನಲ್ಲಿ ಭಯ ಬಿತ್ತಿರುವ ಮಂಗ ಮನುಷ್ಯನ ಬಗ್ಗೆ ನಾವು ಮುಕ್ತ ಮನಸ್ಸಿನಿಂದ ತನಿಖೆ ನಡೆಸುತ್ತಿದ್ದೇವೆ. ಈ ಬಗ್ಗೆ ಪ್ರತ್ಯಕ್ಷದರ್ಶಿಗಳಿಂದ ಸಾಕ್ಷ್ಯ ಸಂಗ್ರಹಿಸುತ್ತಿದ್ದೇವೆ. ಈ ಎಲ್ಲಾ ಅನಾಹುತಕ್ಕೆ ಕಾರಣ, ನಿಜವಾದ ಮಂಗನೋ ಅಥವಾ ಮಂಗನ ವೇಷಧಾರಿಗಳೋ ಅನ್ನುವ ಬಗೆಗೂ ತನಿಖೆ ನಡೆಸಲಾಗುವುದು ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅನಾಮಿಕ ಕರೆಗಳ ಬಗೆಗೂ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಂಗ ಚೇಷ್ಟೆ ಅನ್ನುವುದೆಲ್ಲಾ ಬೋಗಸ್ : ದೆಹಲಿಯ ಪ್ರಸಿದ್ಧ ಪರಿಸರವಾದಿಯಾಬ್ಬರು ಮಂಗಚೇಷ್ಟೆಯನ್ನು ಸ್ಪಷ್ಟವಾಗಿ ಅಲ್ಲಗಳೆಯುತ್ತಾರೆ. ದೆಹಲಿಯ ಪರಿಸರದಲ್ಲಿ ಮಂಗಗಳು ಇರುವುದೇ ಕಡಿಮೆ. ಅದರಲ್ಲೂ ಜನರು ಬಣ್ಣಿಸುವ- ಉದ್ದನೆಯ ಚೂಪು ಉಗುರುಗಳ, ನಾಲ್ಕೂವರೆ ಅಡಿ ಉದ್ದದ ಮಂಗದ ಅಸ್ತಿತ್ವವೇ ಸಾಧ್ಯವಿಲ್ಲ ಎನ್ನುತ್ತಾರವರು.
ಇದು ತೋಳ ಬಂತು ತೋಳದ ಕಥೆಯೇ ...
ಕೆಲವು ವರ್ಷಗಳ ಹಿಂದೆ ಕರ್ನಾಟಕದ ತುಮಕೂರು ಜಿಲ್ಲೆಯ ಪಾವಗಡದಲ್ಲಿ ಇಂಥದ್ದೇ ಅಸಹಜ ಚೇಷ್ಟೆಯ ಘಟನೆಗಳು ವರದಿಯಾಗಿದ್ದವು. ಅಲ್ಲಿನದು ತೋಳ ಬಂತು ತೋಳದ ಕಥೆ. ಇದ್ದಕ್ಕಿದ್ದಂತೆಯೇ ಕಾಣಿಸಿಕೊಳ್ಳುತ್ತಿದ್ದ ತೋಳ ಮಕ್ಕಳನ್ನು ಹೊತ್ತೊಯ್ಯುತ್ತದೆನ್ನುವ ವದಂತಿಗಳಿಂದ ಇಡೀ ರಾಜ್ಯವೇ ಆತಂಕಗೊಂಡಿತ್ತು . ಆ ಬಗ್ಗೆ ನಡೆಸಿದ ತನಿಖೆಗಳು ಯಶಸ್ವಿಯಾಗಿರಲಿಲ್ಲ . ಆದರೆ, ಸ್ವಲ್ಪ ಸಮಯದ ನಂತರ ತೋಳದ ಹಾವಳಿ ಇದ್ದಕ್ಕಿದ್ದಂತೆಯೇ ನಿಂತುಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು. ದೆಹಲಿಯ ಮಂಗ ಮಾನವನ ಹಾವಳಿಯೂ ಇದೇ ಬಗೆಯದೇ ?
(ಯುಎನ್ಐ/ ಇನ್ಫೋ ವಾರ್ತೆ)