ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲಿಗಳಾದ ಕನ್ನಡತಿ ವಿಜಯಲಕ್ಷ್ಮಿ
ಬೆಂಗಳೂರು : ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿ ಶಂಕರ ಬಿದರಿ ಅವರ ಮಗಳು ವಿಜಯಲಕ್ಷ್ಮಿ ಬಿದರಿ ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ಸ್ಥಾನ ಗಳಿಸಿದ್ದಾರೆ. ನಾಗರಿಕ ಸೇವಾ ಪರೀಕ್ಷೆಯಲ್ಲಿ ಕನ್ನಡಿಗರೊಬ್ಬರು ಪ್ರಥಮ ಸ್ಥಾನ ಪಡೆಯುತ್ತಿರುವುದು ಇದೇ ಮೊದಲು.
ಅಲ್ಲದೆ, ಈ ಬಾರಿ ನಾಗರಿಕ ಸೇವಾ ಪರೀಕ್ಷೆಯ ಮರುಯತ್ನದಲ್ಲೂ ಇವರು ದೇಶಕ್ಕೆ ಮೊದಲಿಗರಾಗಿದ್ದಾರೆ. ಪ್ರಸ್ತುತ ವಿಜಯಲಕ್ಷ್ಮಿ ಅವರು ಹರಿಯಾಣದ ಫರೀದಾಬಾದ್ನಲ್ಲಿ ಭಾರತೀಯ ಕಂದಾಯ ಸೇವೆಯ (ಐಆರ್ಎಸ್) ಕೇಂದ್ರ ಅಬಕಾರಿ ಇಲಾಖೆಯಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು.
ಮೂರು ಲಕ್ಷ ಮಂದಿಯ ಪೈಕಿ ನಾನು ಮೊದಲಿಗಳಾಗಿರುವುದು ತುಂಬಾ ಖುಷಿ ತಂದುಕೊಟ್ಟಿದೆ ಎಂದು ವಿಜಯಲಕ್ಷ್ಮಿ, ಇಂಡಿಯಾ ಇನ್ಫೋ ಸಂಪರ್ಕಿಸಿದಾಗ ಹೇಳಿದರು. ಆರಂಭದಿಂದಲೂ ಅವಳು ಶ್ರಮಪಟ್ಟು ಮಾಡಿರುವ ಸಾಧನೆ ಇಡೀ ಕರ್ನಾಟಕ್ಕೆ ಕೀರ್ತಿ ತಂದಿದೆ. ಶ್ಲಾಘನೀಯ ಸಾಧನೆ ಮಾಡಿದ್ದಾಳೆ ಎಂದು ಶಂಕರ್ ಬಿದರಿ ತಮ್ಮ ಖುಷಿಯನ್ನು ಕನ್ನಡ ಇಂಡಿಯಾಇನ್ಫೋ ಬಳಿ ಹಂಚಿಕೊಂಡಿದ್ದಾರೆ.
ವಿಜಯಲಕ್ಷ್ಮಿ ಅವರು ನಗರದ ಆರ್.ವಿ. ಕಾಲೇಜಿನ ಕಂಪ್ಯೂಟರ್ ಸೈನ್ಸ್ ಪದವೀಧರೆ. ಪ್ರಸ್ತುತ ನಿರ್ವಹಿಸುತ್ತಿರುವ ಕೆಲಸಕ್ಕೆ ರಾಜೀನಾಮೆ ನೀಡಿ ಮುಂದಿನ ವಾರ ಬೆಂಗಳೂರಿಗೆ ಆಗಮಿಸಲಿರುವ ವಿಜಯಲಕ್ಷ್ಮಿ ಸೆಪ್ಟೆಂಬರ್ನಲ್ಲಿ ತರಬೇತಿಗಾಗಿ ಮಸ್ಸೂರಿಗೆ ತೆರಳಲಿದ್ದಾರೆ.
(ಇನ್ಫೋ ವಾರ್ತೆ)