ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ಸಮಾಲೋಚನೆ
ಬೆಂಗಳೂರು : ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಗುರುವಾರ ಸಚಿವ ಸಂಪುಟದ ಸಭೆ ಹಾಗೂ ಸರ್ವಪಕ್ಷ ನಾಯಕರ ಸಭೆ ನಡೆಸಿದರು.
ಸಚಿವ ಸಂಪುಟದ ಸಭೆಯಲ್ಲಿ ನಡೆದ ವಿಷಯಗಳ ಚರ್ಚೆಯ ಬಗ್ಗೆ ಔಪಚಾರಿಕವಾಗಿ ತಿಳಿಸಿದ ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಡಿ.ಬಿ. ಚಂದ್ರೇಗೌಡ ಅವರು, ವಿಶ್ವಬ್ಯಾಂಕ್ನಿಂದ ರಾಜ್ಯದ ಅಭಿವೃದ್ಧಿಗೆ ಸಾಲ ಪಡೆಯುವ ಸಂಬಂಧ ರಾಜ್ಯದ ನಿಯೋಗದ ಅಧಿಕಾರಿಗಳು ನೀಡಿರುವ ವರದಿಯ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿಸಿದರು.
ಸಂಪುಟ ಸಭೆಯಲ್ಲಿ ಸಚಿವರುಗಳಾದ ಪ್ರೊ. ಬಿ.ಕೆ. ಚಂದ್ರಶೇಖರ್, ಡಿ.ಬಿ. ಚಂದ್ರೇಗೌಡ, ಮಲ್ಲಿಕಾರ್ಜುನ ಖರ್ಗೆ, ಎಚ್.ಕೆ. ಪಾಟೀಲ್ ಮೊದಲಾದವರು ಪಾಲ್ಗೊಂಡಿದ್ದರು.
ಸರ್ವಪಕ್ಷ ಸಭೆ : ಆನಂತರ ನಡೆದ ಸರ್ವಪಕ್ಷ ನಾಯಕರ ಸಭೆಯಲ್ಲಿ ರಾಜ್ಯದ ನೆಲ, ಜಲವೂ ಸೇರಿದಂತೆ ಹಲವು ಮಹತ್ವಪೂರ್ಣ ವಿಷಯಗಳ ಬಗ್ಗೆ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ವಿವಿಧ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಚರ್ಚೆ ನಡೆಸಿದರು.
ಆಂಧ್ರಪ್ರದೇಶ ಸರಕಾರ ಕೃಷ್ಣ ನದಿ ಕಣಿವೆಯಲ್ಲಿ ಕೈಗೊಂಡಿರುವ ಕಾನೂನು ಬಾಹೀರ ಕಾಮಗಾರಿಗಳ ಸಂಬಂಧ ರಾಜ್ಯ ಕೈಗೊಳ್ಳಬೇಕಾದ ಕ್ರಮಗಳೇನು?, ಭೀಮಾ ನದಿ ಪಾತ್ರದ ಜನತೆ ಕುಡಿಯುವ ನೀರಿಗೂ ಬವಣೆ ಪಡುತ್ತಿರುವಾಗ, ಮಹಾರಾಷ್ಟ್ರ ಸರಕಾರ ನೀರು ಬಿಡಲು ಹಿಂದು ಮುಂದು ನೋಡುತ್ತಿರುವ ಬಗ್ಗೆ ರಾಜ್ಯ ಯಾವ ಕ್ರಮ ಕೈಗೊಳ್ಳಬೇಕು. ಕೆ.ಎಸ್. ಅಧಿಕಾರಿಗಳ ನೇಮಕ, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಬಗ್ಗೆ ಚರ್ಚಿಸಲಾಯಿತು.
ಈ ತಿಂಗಳಲ್ಲೇ ನಡೆಯಲಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಗಡಿ ವಿವಾದ ಹಾಗೂ ಜಲ ವಿವಾದಗಳ ಕುರಿತಂತೆ ರಾಜ್ಯ ಮಂಡಿಸಬೇಕಾದ ನಿಲವುಗಳೇನು ಎಂಬ ಬಗ್ಗೆಯೂ ಮುಖ್ಯಮಂತ್ರಿಗಳು ಪ್ರತಿಪಕ್ಷ ನಾಯಕರೊಂದಿಗೆ ಸಮಾಲೋಚನೆ ನಡೆಸಿದರು. ಪ್ರತಿಪಕ್ಷ ನಾಯಕರು ಹಲವು ಸಲಹೆಗಳನ್ನು ಈ ಸಂದರ್ಭದಲ್ಲಿ ನೀಡಿದರು.
ಸಚಿವರಾದ ಡಿ.ಬಿ. ಚಂದ್ರೇಗೌಡ, ಮಲ್ಲಿಕಾರ್ಜುನ ಖರ್ಗೆ, ಟಿ.ಬಿ. ಜಯಚಂದ್ರ, ಪ್ರತಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್, ಡಿ.ಎಸ್. ಶಂಕರಮೂರ್ತಿ, ಎಂ.ಆರ್. ತಂಗಾ, ಸಿದ್ಧರಾಮಯ್ಯ, ಪಿ.ಜಿ.ಆರ್. ಸಿಂಧ್ಯಾ, ಬೈರೇಗೌಡ ಮೊದಲಾದವರು ಪಾಲ್ಗೊಂಡಿದ್ದರು.
ಮುಖಪುಟ / ಇವತ್ತು... ಈ ಹೊತ್ತು...