ಪ್ರತಿ ಜಿಲ್ಲೆಯಲ್ಲೂ ಬೀಟಿ ಕೇಂದ್ರ ತಲೆಎತ್ತಲಿ - ಕೃಷ್ಣ
ಬೆಂಗಳೂರು : ಕೃಷಿ ಕ್ಷೇತ್ರದಲ್ಲಿ ದಾಪುಗಾಲು ಹಾಕುವ ನಿಟ್ಟಿನಲ್ಲಿ ಜೈವಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಸಂಶೋಧನೆಗೆ ಬೇಕಾದ ಸಕಲ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂಬ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಠರಾವಿನ ಮೂಲಕ 3 ದಿನಗಳ ಬೆಂಗಳೂರು ಬಯೋ ಡಾಟ್ ಕಾಂ ಮೇಳಕ್ಕೆ ತೆರೆ ಬಿದ್ದಿದೆ.
ಐಟಿ ಕ್ಷೇತ್ರದಲ್ಲಿ ರಾಜ್ಯ ಅಂದುಕೊಂಡಿದ್ದನ್ನು ಸಾಧಿಸಿದೆ. ಈಗ ನಮ್ಮ ಮುಂದಿನ ಗುರಿ ಕೃಷಿ ಕ್ಷೇತ್ರದ ಅಭಿವೃದ್ಧಿ . ಜೈವಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ನಾವು ಕೃಷಿ ಕ್ಷೇತ್ರದಲ್ಲೂ ಅಭಿವೃದ್ಧಿ ಹೊಂದಬಹುದಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಹಾಗೂ ಆಂಧ್ರಪ್ರದೇಶ ಪರಸ್ಪರ ಸಹಕಾರಿ ಧೋರಣೆ ತಳೆಯಬೇಕು ಎಂದು ಹೈದರಾಬಾದ್ನ ಲ್ಯಾಂಡ್ ಪವರ್ ಬಯೋಟೆಕ್ ಸಂಸ್ಥೆಯ ವೆಬ್ಸೈಟ್ ಉದ್ಘಾಟಿಸಿದ ನಂತರ ಮಂಗಳವಾರ ಕೃಷ್ಣ ಹೇಳಿದರು.
ರಾಜ್ಯದ ಕೃಷಿ ಕ್ಷೇತ್ರದಲ್ಲಿ ಪ್ರಸ್ತುತ ಜೈವಿಕ ತಂತ್ರಜ್ಞಾನದ ಬಳಕೆ ಶೇ.10ಕ್ಕಿಂತಲೂ ಕಡಿಮೆ ಇದೆ. ಚೀನಾ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿರುವುದು ಜೈವಿಕ ತಂತ್ರಜ್ಞಾನದಿಂದಲೇ ಎಂಬುದನ್ನು ನಾವು ಮನಗಾಣಬೇಕು. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಜೈವಿಕ ತಂತ್ರಜ್ಞಾನ ಪಾರ್ಕ್ ಸ್ಥಾಪನೆಯಾಗಬೇಕು ಎಂದರು.
ಮೇಳಕ್ಕೆ 25 ಸಾವಿರ ಮಂದಿ : ಧೋ ಅಂತ ಸುರಿದ ಮಳೆಯ ನಡುವೆಯೂ 25 ಸಾವಿರ ಮಂದಿ ಬೀಟಿ ಮೇಳವನ್ನು ವೀಕ್ಷಿಸಿದ್ದಾರೆ. ಇವರಲ್ಲಿ ಅರ್ಧಪಾಲು ವಾಣಿಜ್ಯ ಸಂಸ್ಥೆಗಳ ಪ್ರತಿನಿಧಿಗಳದು. ಅಂತಿಮ ದಿನ ಯುವ ಉತ್ಸಾಹಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮೇಳದ ಉದ್ದಿಶ್ಯ ಅರಿಯದ ಇನ್ನು ಕೆಲವು ಜನ ಚೀನಾದ ವಸ್ತುಗಳು ಎಲ್ಲಿ ಸಿಗುತ್ತವೆ ಎಂದು ಹುಡುಕಾಟ ನಡೆಸಿದ್ದರು !
ವೆಬ್ಸೈಟ್ : ಈ ಮೇಳ ರಾಷ್ಟ್ರದಲ್ಲಿ ನಡೆದದ್ದು ಇದೇ ಮೊದಲು. ಜೈವಿಕ ತಂತ್ರಜ್ಞಾನದಲ್ಲಿ ರಾಜ್ಯ ಇನ್ನೂ ಕೂಸು. ಮುಂದೆ ಐಟಿಯಂತೆಯೇ ಬೀಟಿ ಕೂಡ ಸಾಕಷ್ಟು ಅಭಿವೃದ್ಧಿ ಸಾಧಿಸುವುದು ಖರೆ ಎಂದ ಕರ್ನಾಟಕ ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ ವಿವೇಕ್ ಕುಲಕರ್ಣಿ, ಮೇಳದ ಸಾರ ತಿಳಿಯಲು http://www.bangalorebio.com/ ವೆಬ್ಸೈಟಿಗೆ ಭೇಟಿ ಕೊಡಬಹುದು ಎಂದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...