ಮಾರುಕಟ್ಟೆಗಾಗಿ ಕರಸೇವೆ- ಮೀನುಗಾರ ಮಹಿಳೆಯರ ಬೆದರಿಕೆ
ಮುರ್ಡೇಶ್ವರ : ಇನ್ನೊಂದು ವಾರದೊಳಗಾಗಿ ಅರ್ಧದಲ್ಲಿ ನಿಂತಿರುವ ಮುರ್ಡೇಶ್ವರದ ಮೀನು ಮಾರುಕಟ್ಟೆ ಕಾಮಗಾರಿಯನ್ನು ಪ್ರಾರಂಭಿಸದಿದ್ದಲ್ಲಿ ಏಪ್ರಿಲ್ 1 ರಿಂದ ಮೀನುಗಾರ ಮಹಿಳೆಯರು ಕರಸೇವೆ ಪ್ರಾರಂಭಿಸುವರೆಂದು ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಾ ಮೊಗೇರ ಹೇಳಿದ್ದಾರೆ.
ಸ್ಥಳೀಯ ಮೀನುಗಾರರ ಗಮನಕ್ಕೆ ತಾರದೆ ಜಿಲ್ಲಾಧಿಕಾರಿಗಳು ಏಕಾಏಕಿ ಮಾರುಕಟ್ಟೆಯ ಕಾಮಗಾರಿ ನಿಲ್ಲಿಸಿದ್ದಾರೆ. ಕಾಮಗಾರಿ ನಿಂತು ವಾರಗಳೇ ಕಳೆದಿದ್ದರೂ, ಕಾಮಗಾರಿ ಸ್ಥಗಿತಕ್ಕೆ ಈವರೆಗೆ ಕಾರಣ ನೀಡಿಲ್ಲ . ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸದಿದ್ದಲ್ಲಿ ಹೋರಾಟ ನಡೆಯುವುದು ಅನಿವಾರ್ಯವಾಗುತ್ತದೆ. ಏಪ್ರಿಲ್ 1 ರಿಂದ ಸಾವಿರಕ್ಕೂ ಹೆಚ್ಚು ಮೀನುಗಾರ ಮಹಿಳೆಯರು ಮುರ್ಡೇಶ್ವರಕ್ಕೆ ಆಗಮಿಸಿ, ಕರಸೇವೆ ನಡೆಸುವರು ಎಂದು ಮೊಗೇರ ಹೇಳಿದರು. ಮುರ್ಡೇಶ್ವರ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡತ್ತಿದ್ದರು.
ಸಂಕಷ್ಟದಲ್ಲಿರುವ ಮೀನುಗಾರರ ಪಾಲಿಗೆ ಜೀವ ಬಿಟ್ಟರೆ ಏನೂ ಉಳಿದಿಲ್ಲ . ಕಾರವಾರ ನೌಕಾನೆಲೆ ಯೋಜನೆಗಾಗಿ ಆಸ್ತಿಪಾಸ್ತಿ ತ್ಯಾಗ ಮಾಡಿದ ಮೀನುಗಾರರಿಗೆ ಸರ್ಕಾರದ ಯಾವ ಪರಿಹಾರ ಕಾರ್ಯಗಳೂ ಮುಟ್ಟಿಲ್ಲ . ನಿರಾಶ್ರಿತರ ಬಡಾವಣೆಗಳಲ್ಲಿ ನೀರು, ಒಳಚರಂಡಿಗಳಲ್ಲಿನ ಅವ್ಯವಸ್ಥೆಯಿಂದಾಗಿ ಸಿಡುಬು ಕಾಣಿಸಿಕೊಂಡಿದೆ. ಮೀನುಗಾರರ ಹಿತಾಸಕ್ತಿಗೆ ಪೂರಕವಾದ ಯಾವುದೇ ಯೋಜನೆಗೆ ಸ್ವಾಗತವಿದೆ ಎಂದು ಮೊಗೇರಾ ಹೇಳಿದರು.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...