ಚನ್ನಪಟ್ಟಣ: ಕನ್ನಡ ಕಾವ್ಯ ಕಾವೇರಿ ಗೀತ ಗಾಯನ ಕಾರ್ಯಕ್ರಮ
ಚನ್ನಪಟ್ಟಣ : ಪಾಶ್ಚಾತ್ಯ ಪ್ರಭಾವ, ದೃಶ್ಯ ಮಾಧ್ಯಮಗಳ ಹಾವಳಿಯಿಂದ ನಮ್ಮ ಮಣ್ಣಿನ ಸಾಂಸ್ಕೃತಿಕ ಮೌಲ್ಯಗಳಾದ ಜಾನಪದ ಕಲೆಗಳು ವಿನಾಶದ ಅಂಚಿನಲ್ಲಿವೆ. ಕಿರುತೆರೆಯಲ್ಲಿ ಪಾಶ್ಚಾತ್ಯ ನೃತ್ಯಕ್ಕೇ ಮಾನ್ಯತೆ ಮನ್ನಣೆ ದೊರಕುತ್ತಿದ್ದು, ಜಾನಪದ ನೃತ್ಯಗಳನ್ನು ಕಡೆಗಣಿಸಲಾಗಿದೆ ಎಂದು ಜಾನಪದ ವಿದ್ವಾಂಸ ಕೆ. ಶಿವಪ್ಪ ಆರೋಪಿಸಿದರು.
ನಮ್ಮ ಸಾಂಸ್ಕೃತಿಕ ಮೌಲ್ಯಗಳಾದ ಗೀಗೀಪದ, ಸೋಬಾನೆ ಪದ, ಚೌಡಿಕೆ ಪದ, ಕೋಲಾಟದ ಪದಗಳು, ಡೊಳ್ಳು, ಸುಗಮಸಂಗೀತವೇ ಮೊದಲಾದ ಕನ್ನಡದ ಸೊಗಡಿನ ಸಂಗೀತ - ನೃತ್ಯಗಳನ್ನು ಕಡೆಗಣಿಸಿರುವ ದೃಶ್ಯ ಮಾಧ್ಯಮಗಳು ಪಾಶ್ಚಾತ್ಯ ಸಂಗೀತಕ್ಕೆ ಅಂಟಿಕೊಂಡಿವೆ. ಇದರಿಂದ ಭಾರತೀಯ ಸಂಸ್ಕೃತಿ ಪರಂಪರೆಗೆ ದಕ್ಕೆಯುಂಟಾಗುತ್ತಿದೆ ಎಂದರು.
ಚನ್ನಪಟ್ಟಣ ತಾಲೂಕಿನ ಚಕ್ಕರೆ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಾಲೂಕು ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ ಕನ್ನಡ ಕಾವ್ಯ ಕಾವೇರಿ ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೃಶ್ಯ ಮಾಧ್ಯಮಗಳಲ್ಲಿ ಅಶ್ಲೀಲತೆಯ ವೈಭವೀಕರಣ ನಡೆಯುತ್ತಿದೆ. ನಮ್ಮ ಸಾಂಪ್ರದಾಯಿಕ ಕಲೆಗಳು ಜನಮಾನಸದಿಂದ ಮರೆಯಾಗುತ್ತಿವೆ. ಹೀಗಾಗಿ ನಮ್ಮ ಮುಂದಿನ ಪೀಳಿಗೆಗೆ ಜಾನಪದ ಕಲೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಿಯೋಜಿಸಲಾಗಿದೆ ಎಂದು ಪತ್ರಕರ್ತ ಸು.ತ. ರಾಮೇಗೌಡ ತಿಳಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕರ್ಮಯೋಗಿ ಚಾರಿಟಬಲ್ ಟ್ರಸ್ಟ್ ಕಾರ್ಯಕ್ರಮದ ಸಹಭಾಗಿತ್ವ ವಹಿಸಿತ್ತು.