ಸರಕಾರಿ ನೌಕರರ ವಿಳಂಬನೀತಿ, ಭ್ರಷ್ಟಾಚಾರದಂತೆಶಿಕ್ಷಾರ್ಹ : ಕೃಷ್ಣ
ಬೆಂಗಳೂರು : ಸರಕಾರಿ ಕಚೇರಿಗಳಲ್ಲಿ ಆಗುವ ಅನಗತ್ಯ ವಿಳಂಬವನ್ನು ಭ್ರಷ್ಟಾಚಾರದಂತೆಯೇ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೇಳಿದ್ದಾರೆ.
ಸೋಮವಾರ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಸುವರ್ಣ ಭವನದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದ ಅವರು, ಸರಕಾರಿ ಕೆಲಸದಲ್ಲಿ ವಿಳಂಬ ಮಾಡುವುದು ಸಹ ಒಂದು ಶಿಕ್ಷಾರ್ಹ ಅಪರಾಧವಾಗಿದ್ದು, ಸಾರ್ವಜನಿಕ ಸೇವೆಯ ಅಧಿನಿಯಮಗಳಲ್ಲಿ ಶಿಕ್ಷೆಯ ಜಾರಿಗೆ ನಿಯಮಾವಳಿಗಳನ್ನು ಸೇರಿಸಲೇ ಬೇಕು ಎಂದರು.
ಬೆಂಗಳೂರು ನಗರ ಪಾಲಿಕೆಯ ಇಬ್ಬರು ಅಧಿಕಾರಿಗಳ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಪುರಸ್ಕರಿಸಿದ ಸಹಕಾರ ಸಂಘವನ್ನು ಅವರು ಪ್ರಶಂಸಿಸಿದರು. ಯಾವಾಗಲೂ ಉತ್ತಮ ಕಾರ್ಯವನ್ನು ಶ್ಲಾಘಿಸಲೇಬೇಕು. ಅಂತೆಯೇ ಕೆಟ್ಟ ಕೆಲಸಕ್ಕೆ ಶಿಕ್ಷೆ ಆಗಲೇ ಬೇಕು ಎಂದು ಕೃಷ್ಣ ನುಡಿದರು.
ಪತ್ರಿಕೆಗಳ ಗಾತ್ರ ಏನೇ ಇರಲಿ, ಅವು ವಿಶ್ವಾಸಾರ್ಹವಾಗಿರಬೇಕು ಎಂದ ಕೃಷ್ಣ, 35 ಲಕ್ಷ ರುಪಾಯಿ ಅಂದಾಜಿನ ಸಹಕಾರ ಸಂಘದ ಸುವರ್ಣ ಭವನದ ನಿರ್ಮಾಣಕ್ಕೆ 15 ಲಕ್ಷ ರುಪಾಯಿಗಳ ನೆರವು ನೀಡುವುದಾಗಿ ಘೋಷಿಸಿದರು. ಇದೇ ಸಂದರ್ಭದಲ್ಲಿ ಟಿಎಸ್ಸ್ಆರ್ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪತ್ರಕರ್ತರನ್ನು ಸನ್ಮಾನಿಸಲಾಯಿತು.
ಕ್ವೀನ್ಸ್ ರಸ್ತೆಯ ಕೃಷಿ ತಂತ್ರಜ್ಞರ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಆದಿ ಚುಂಚನಗಿರಿ ಮಹಾ ಸಂಸ್ಥಾನದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಸಚಿವರಾದ ಪ್ರೊ. ಬಿ.ಕೆ. ಚಂದ್ರಶೇಖರ್, ಸಂಘದ ಅಧ್ಯಕ್ಷ ಟಿ.ನಾಗರಾಜ್ ಮೊದಲಾದವರು ಪಾಲ್ಗೊಂಡಿದ್ದರು.