ಮಾರ್ಚ್ 1ರಂದು ಕರ್ನಾಟಕದ ಎಲ್ಲಾ ಶಾಲಾ- ಕಾಲೇಜು ಬಂದ್
ಬೆಂಗಳೂರು : ಸರ್ಕಾರಿ ಅನುದಾನದಲ್ಲಿ ಶೇ. 15ರಷ್ಟು ಖೋತಾ ಜಾರಿಯನ್ನು ವಿರೋಧಿಸಿ ಅನುದಾನಿತ ಪದವಿ ಕಾಲೇಜುಗಳು ಮೊನ್ನೆ ತಾನೆ ಮುಷ್ಕರ ನಡೆಸಿರುವ ಬೆನ್ನಲ್ಲೇ ಶಾಶ್ವತ ಅನುದಾನ ರಹಿತ ಶಾಲಾ- ಕಾಲೇಜುಗಳಿಗೂ ಅನುದಾನ ಕೊಡುವಂತೆ ಆಗ್ರಹಿಸಲು ರಾಜ್ಯ ಮಟ್ಟದ ವಿವಿಧ ಸಂಘಟನೆಗಳ ಮಹಾ ಮಂಡಳಿ ತೀರ್ಮಾನಿಸಿದೆ. ಈ ನಿಮಿತ್ತ ಬರುವ ಮಾರ್ಚ್ 1 ರಂದು ರಾಜ್ಯದ ಎಲ್ಲಾ ಖಾಸಗಿ, ಅನುದಾನಿತ, ಅನುದಾನ ರಹಿತ ಕಾಲೇಜುಗಳ ತರಗತಿಗಳನ್ನು ಬಹಿಷ್ಕರಿಸಲಾಗುವುದು.
ರಾಜ್ಯದ ಎಲ್ಲಾ ತಾಲ್ಲೂಕು ಕಚೇರಿಗಳ ಮುಂದೆ ಧರಣಿ ಕುಳಿತು, ಶಾಶ್ವತ ಅನುದಾನ ರಹಿತ ಕಾಲೇಜುಗಳಿಗಾಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಮಂಡಳಿಯ ಕಾರ್ಯಾಧ್ಯಕ್ಷ ಸಿ.ಎಚ್.ಗೌಡರ್ ಜಂಗಮುರಾಳ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅನುದಾನಿತ ಕಾಲೇಜುಗಳ ಅನುದಾನದಲ್ಲಿ ಖೋತಾ ಮಾಡಿರುವುದನ್ನು ವಿರೋಧಿಸಿ ಮೊನ್ನೆ ನಡೆಸಿದ ಮುಷ್ಕರದಿಂದ ಸರ್ಕಾರಕ್ಕೆ ಬಿಸಿ ತಟ್ಟದಿದ್ದಲ್ಲಿ ಫೆಬ್ರವರಿ 26ರಿಂದ ಮತ್ತೆ ಮುಷ್ಕರ ನಡೆಯುವ ಸಾಧ್ಯತೆ ಇದೆ. ಪರೀಕ್ಷೆಗಳು ಹತ್ತಿರಾಗುತ್ತಿರುವ ಸಂದರ್ಭದಲ್ಲಿ ಈ ರೀತಿ ಸರಣಿ ಮುಷ್ಕರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದಂತೂ ಒಳ್ಳೆಯದಲ್ಲ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡು ಬೇಗ ಫುಲ್ಸ್ಟಾಪ್ ಹಾಕಲಿ.
(ಇನ್ಫೋ ವಾರ್ತೆ)