ಸಿನಿತಾರೆಯಾಂದಿಗೆ ಗಂಗೂಲಿ ಕಾಳಹಸ್ತಿಯಲ್ಲಿ ಪೂಜೆ ಮಾಡಿದರು
ಚೆನ್ನೈ : ಭಾರತ ಕ್ರಿಕೆಟ್ ತಂಡದ ನಾಯಕ ಸೌರವ್ ಗಂಗೂಲಿ ಖ್ಯಾತ ಸಿನಿತಾರೆಯಾಬ್ಬರೊಂದಿಗೆ ಶುಕ್ರವಾರ ಆಂಧ್ರಪ್ರದೇಶ ಹಾಗೂ ತಮಿಳುನಾಡು ಗಡಿಯ ಕಾಳಹಸ್ತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹಾಗಂತ ತಮಿಳುನಾಡಿನ ಕೆಲವು ಮಾಧ್ಯಮಗಳು ವರದಿ ಮಾಡಿದ್ದು, ಸುದ್ದಿಗಾರರು ಇದನ್ನು ಖಾತ್ರಿ ಪಡಿಸಿಕೊಳ್ಳಲು ಐಐಟಿ ಚೆಮ್ಪ್ಲಾಸ್ಟ್ ಕ್ರೀಡಾಂಗಣಕ್ಕೆ ದೌಡಾಯಿಸಿದರು. ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಪೇಚು ಮೋರೆಹಾಕಿಕೊಂಡು ಹಿಂತಿರುಗಿದರು.
ಸುದ್ದಿಗಾರರ ಕುತೂಹಲಕ್ಕೆ ಗಂಗೂಲಿ ತಣ್ಣೀರೆರಚಿದ್ದು ಹೀಗೆ- ಸಿದ್ಧತಾ ಶಿಬಿರದ ಬಗ್ಗೆ ಏನಾದರೂ ಪ್ರಶ್ನೆ ಇದ್ದರೆ ಕೇಳಿ. ಇಲ್ಲದಿದ್ದರೆ ನಾನು ಇಲ್ಲಿ ನಿಮಗೆ ಅಲಭ್ಯ. ಕ್ರಿಕೆಟ್ಟಿನ ಬಗ್ಗೆ ಏನಿದ್ದರೂ ಕೇಳಿ, ಹೇಳುತ್ತೇನೆ. ಕೆಲಸಕ್ಕೆ ಬಾರದ ಪ್ರಶ್ನೆಗಳಿಗೆ ಉತ್ತರ ಕೊಡಲು ನಾನು ಸಿದ್ಧನಿಲ್ಲ.
ಗಂಗೂಲಿ ಕೊಟ್ಟ ಹಾರಿಕೆ ಪ್ರತಿಕ್ರಿಯೆಗೆ ದಂಗಾದ ಸುದ್ದಿಗಾರರು ತಮ್ಮ ಕುತೂಹಲವನ್ನು ಬದಿಗಿಟ್ಟು, ಆಸ್ಟ್ರೇಲಿಯಾ ತಂಡ ಅಷ್ಟೇನೂ ಪ್ರಬಲವಲ್ಲದ ತಂಡಗಳ ವಿರುದ್ಧ ಅಷ್ಟೇ ಗೆದ್ದಿರುವುದು ಅಂತ ತಾವು ಹೇಳಿದ್ದು ನಿಜವೇ, ಸಂಭವನೀಯರ ತಂಡಕ್ಕೆ ಸೇರಿಸಿಕೊಂಡಿರುವ ಲೆಗ್ಗಿ ನರೇಂದ್ರ ಹಿರ್ವಾನಿ ಅವರಿಗೆ ಟೆಸ್ಟ್ನಲ್ಲಿ ಛಾನ್ಸ್ ಇದೆಯಾ ಮೊದಲಾದ ಪ್ರಶ್ನೆಗಳನ್ನು ಕೇಳಿದರು.
‘ನನಗೆ ಏನೂ ಗೊತ್ತಿಲ್ಲ. ಫೆಬ್ರವರಿ 19ನೇ ತಾರೀಖು ನಾನು ಹಾಗೂ ಕೋಚ್ ಜಾನ್ ರೈಟ್ ತಂಡವನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸುವ ಸಾಧ್ಯತೆಯಿದೆ. ಹಿರ್ವಾನಿ ಆಡುತ್ತಾರೋ, ಇಲ್ಲವೋ ಆವತ್ತೇ ಗೊತ್ತಾಗುತ್ತೆ’, ಚುಟುಕಾದ ಫಟ್ ಉತ್ತರ ಗಂಗೂಲಿಯಿಂದ ಬಂತು. ಮುಖ ಸುತ್ತುವರೆದಿದ್ದ ಮೈಕುಗಳ ಕೈಯಿಂದ ಪಕ್ಕಕ್ಕೆ ಸರಿಸಿ ಗಂಗೂಲಿ ಹೊರಟೇಬಿಟ್ಟರು.
ಆ ಸಿನಿಮಾ ತಾರೆ ಯಾರಿರಬಹುದು? ಯಾವತ್ತೂ ಇಲ್ಲದ ಪೂಜೆ ಶುಕ್ರವಾರವೇ, ಅದೂ ಆಕೆಯ ಜೊತೆಗೇ ಯಾಕೆ ? ಅಜರ್ ಹೋದೆಡೆಯೆಲ್ಲಾ ಗಂಟುಬೀಳುತ್ತಿದ್ದ ಬಿಜಲಾನಿ ತರಹ ಯಾವ ಸ್ಟಾರ್ ಗಂಗೂಲಿ ಬೆನ್ನು ಹತ್ತಿದೆ ಅಥವಾ ಗಂಗೂಲಿ ಆಕೆಯ ಬೆನ್ನು ಹತ್ತಿದ್ದಾರೆ ?... ಸುದ್ದಿಗಾರರ ಗುಸುಗುಸು ಪಿಸುಪಿಸು ಮುಂದುವರೆದಿದೆ.
(ಯುಎನ್ಐ)