ಕೇಂದ್ರ ಸರ್ಕಾರದ ವಿರುದ್ಧ ಮಾ.25 ರಂದು ರೈತರ ರ್ಯಾಲಿ
ಬೆಂಗಳೂರು : ರೈತ ವಿರೋಧಿ ರಾಜ್ಯ ಸರ್ಕಾರದ ವಿರುದ್ಧ ಮಾರ್ಚ್ 1 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಬಿಜೆಪಿ ಸಜ್ಜಾಗುತ್ತಿರುವಂತೆಯೇ, ಅದಕ್ಕೂ ಮುನ್ನ ರೈತ ವಿರೋಧಿ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ಬೃಹತ್ ರೈತರ ರ್ಯಾಲಿಯನ್ನು ಸಂಘಟಿಸಲು ಕಾಂಗ್ರೆಸ್ ಉದ್ದೇಶಿಸಿದೆ.
ವಿಶ್ವ ವ್ಯಾಪಾರ ಸಂಘಟನೆಯ ಒಪ್ಪಂದಗಳಿಂದಾಗಿ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಕೇಂದ್ರ ಸರಕಾರದ ಗಮನಕ್ಕೆ ತರಲು, ಫೆ ಬ್ರವರಿ 25ರಂದು ದೆಹಲಿಯಲ್ಲಿ ರೈತರ ಬೃಹತ್ ರ್ಯಾಲಿಯನ್ನು ಆಯೋಜಿಸಲಾಗಿದ್ದು ರಾಜ್ಯದ ಆರು ಸಾವಿರ ಮಂದಿ ರೈತರು ರ್ಯಾಲಿಯಲ್ಲಿ ಭಾಗವಹಿಸುವರು.
ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ರ್ಯಾಲಿಯನ್ನು ನಡೆಸಲಾಗುವುದು. ಪ್ರತಿ ಜಿಲ್ಲೆಯಿಂದ ಕನಿಷ್ಠ 200 ಮಂದಿ ರೈತರನ್ನು ರ್ಯಾಲಿಗೆ ಕಳುಹಿಸಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ವಿ.ಎಸ್. ಕೌಜಲಗಿ ಹೇಳಿದ್ದಾರೆ. ಆಯಾಯ ಜಿಲ್ಲೆಯಿಂದ ಹೊರಡುವ ರೈಲುಗಳಲ್ಲಿ ರೈತರು ದೆಹಲಿಗೆ ಪ್ರಯಾಣಿಸಲಿದ್ದಾರೆ.
ಡಬ್ಲ್ಯೂಟಿಒ ಒಪ್ಪಂದಗಳಿಂದಾಗಿ ಕೃಷಿ ಉತ್ಪನ್ನಗಳ ಬೆಲೆ ತೀರಾ ಕುಸಿಯುತ್ತಿದ್ದು, ರೈತರು ಜೀವನ ನಡೆಸುವುದು ತೀರಾ ದುಸ್ತರವಾಗಿದೆ. ಈ ನಡುವೆ ಇನ್ನಷ್ಟು ವಸ್ತುಗಳ ಆಮದು ಸುಂಕವನ್ನು ತಗ್ಗಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಕೇಂದ್ರದ ರೈತ ವಿರೋಧಿ ಕ್ರಮಗಳನ್ನು ಖಂಡಿಸಲು ರ್ಯಾಲಿ ಏರ್ಪಡಿಸಲಾಗಿದೆ ಎಂದು ಕೌಜಲಗಿ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)