ಫೆ. 27ರಂದು ಬೆಂಗಳೂರಲ್ಲಿ ಸಿಐಐ ಗುಣಾಧಿಕ್ಯ ಕೇಂದ್ರದ ಉದ್ಘಾಟನೆ
ಬೆಂಗಳೂರು : ಹೈಟೆಕ್ ನಗರಿಗೆ ಮತ್ತೊಂದು ಗರಿ. ಕೈಗಾರಿಕಾ ಗುಣಮಟ್ಟ ವರ್ಧನೆ ಸೇವೆಗೆ ಮತ್ತೊಂದು ಸುಸಜ್ಜಿತ ಬೃಹತ್ ಕಟ್ಟಡ ಸಿದ್ಧವಾಗಿದೆ. ಅದೇ ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ದ ಗುಣಾಧಿಕ್ಯ ಕೇಂದ್ರ. ಇದೇ ಫೆಬ್ರವರಿ 27ರಂದು ಈ ಕಟ್ಟಡ ಉದ್ಘಾಟನೆಯಾಗಲಿದ್ದು, ಗುಣಮಟ್ಟ ಸಮಸ್ಯೆ ನಿವಾರಣೆಗಳ ಮೆಕ್ಕಾ ಎನಿಸಲಿದೆ.
ನಗರದ ಹೊರವಲಯದ ಪಶ್ಚಿಮ ಭಾಗದ ಎತ್ತರ ಪ್ರದೇಶದಲ್ಲಿ ನಾಲ್ಕು ಎಕರೆ ವಿಶಾಲ ಜಾಗೆಯ ಮಧ್ಯೆ ಚೆಂದದ ವಿನ್ಯಾಸದ ಕಟ್ಟಡ ಎದ್ದು ನಿಂತಿದೆ. ವಿದ್ಯುತ್ ವಲಯದ ಬಹುರಾಷ್ಟ್ರೀಯ ಸಂಸ್ಥೆ ಎಬಿಬಿ ಹಾಗೂ ಸಿಐಐ ನಡುವಣ ಒಪ್ಪಂದದ ಫಲವೇ ಈ ಕೇಂದ್ರ. 1997ರಲ್ಲಿ, ಅಂದಿನ ವಿತ್ತ ಸಚಿವರು ಶಂಕುಸ್ಥಾಪನೆ ಮಾಡಿದ್ದ ಕಟ್ಟಡ ಇಂದು ಸುಸಜ್ಜಿತ ಕೇಂದ್ರ. ಕೈಗಾರಿಕಾ ಗುಣಮಟ್ಟದ ಬಗೆಗೆ ತುಡಿತವಿರುವವರಿಗೆ ಇದೊಂದು ಪ್ರಮುಖ ಪ್ರವಾಸೀ ತಾಣವಾಗಲಿದೆ ಎಂಬುದು ಕೈಗಾರಿಕಾ ಪಂಡಿತರ ಲೆಕ್ಕಾಚಾರ.
ಫೆಬ್ರವರಿ 27ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಇನ್ಫೋಸಿಸ್ ಅಧ್ಯಕ್ಷ ಎನ್.ಆರ್. ನಾರಾಯಣ ಮೂರ್ತಿ ಹಾಗೂ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ನಿರ್ದೇಶಕ ಆರ್.ಎ.ಮಶೇಲ್ಕರ್ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.
ಬ್ಯಾಂಕಿಂಗ್, ಉತ್ಪಾದನೆ, ಸಾರ್ವಜನಿಕ ಸೇವೆ, ಸರ್ಕಾರಿ ಸಂಸ್ಥೆಗಳು., ಆರೋಗ್ಯ ರಕ್ಷಣೆ, ಹಡಗು ಉದ್ಯಮ, ವಿಮೆ ಮೊದಲಾದ ಕ್ಷೇತ್ರಗಳ ಸೇವಾ ನಿರ್ವಹಣಾ ಗುಣಮಟ್ಟದ ಬಗ್ಗೆ ಸಮಗ್ರ ತರಪೇತಿ ಕಾರ್ಯಕ್ರಮಗಳನ್ನು ಕೇಂದ್ರ ಆಯೋಜಿಸಲಿದೆ.
ಕೇಂದ್ರದ ಉದ್ಘಾಟನೆಯ ದಿನದಂದೇ ‘ಕೆಲಸದ ಖುಷಿ’ (ಜಾಯ್ ಆಫ್ ವರ್ಕ್) ಎಂಬ ವಿಷಯ ಕುರಿತ ಮೂರು ದಿನಗಳ ಕಮ್ಮಟವನ್ನು ಜಪಾನಿನ ಪ್ರೊ.ಕೊಸಾಕು ಯೋಶಿದಾ ಉದ್ಘಾಟಿಸಿ, ನಿರ್ವಹಿಸಲಿದ್ದಾರೆ.
(ಯುಎನ್ಐ)