ಗಡಿ ವಿಷಯ ಕೆದಕಿದ ಕೇಂದ್ರ ಸಚಿವರ ರಾಜೀನಾಮೆಗೆ ಒತ್ತಾಯ
ಬೆಳಗಾವಿ : ಅನವಶ್ಯಕವಾಗಿ ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದವನ್ನು ಕೆದಕಿ, ಕನ್ನಡಿಗರ ವಿರುದ್ಧ ಬೇಜವಾಬ್ದಾರಿ ಹೇಳಿಕೆ ನೀಡಿರುವ ಕೇಂದ್ರ ಕೈಗಾರಿಕಾ ಸಚಿವ ಮನೋಹರ್ ಜೋಷಿ ರಾಜೀನಾಮೆ ನೀಡಬೇಕು ಎಂದು ಇಲ್ಲಿನ ಹಲವು ಕನ್ನಡ ಸಂಘಟನೆಗಳು ಒತ್ತಾಯಿಸಿವೆ.
ಕನ್ನಡ ಹಾಗೂ ಮರಾಠಿ ಜನರ ನಡುವೆ ಸಾಮರಸ್ಯ ಹಾಗೂ ಸೌಹಾರ್ದತೆ ಹಾಳು ಮಾಡವಂತಹ ಹೇಳಿಕೆ ನೀಡಿರುವ ಸಚಿವ ಜೋಷಿ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಬೇಕು ಎಂದು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಡ ಸಂಘಟನೆಯ ನಾಯಕ ಅಶೋಕ್ ಚಂದರಗಿ ಅವರು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಆಗ್ರಹಿಸಿದರು.
ಹಲವಾರು ವರ್ಷಗಳಿಂದ ಈ ಪ್ರದೇಶದಲ್ಲಿ ಕನ್ನಡಿಗರು ಹಾಗೂ ಮರಾಠಿಗರು ಸ್ನೇಹ ಭಾವದಿಂದ ಬದುಕುತ್ತಿದ್ದಾರೆ. ಇಂತಹ ಹೇಳಿಕೆಗಳು ಉಭಯ ರಾಜ್ಯಗಳ ನಾಗರಿಕರ ಮನ ಕದಡುತ್ತವೆ ಎಂದೂ ಅವರು ಹೇಳಿದರು. ಬೆಳಗಾವಿಯಲ್ಲಿ ಶಿವಸೇನೆಯನ್ನು ಬಲಪಡಿಸುವ ಕಾರ್ಯಕ್ರಮ ನಿಮಿತ್ತ ಶುಕ್ರವಾರ ಇಲ್ಲಿಗೆ ಆಗಮಿಸಿದ್ದ ಸಚಿವರು, ಕನ್ನಡಿಗರು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಒಪ್ಪಿಸುವಂತೆ ಮಾಡಲು ಶಿವಸೇನೆ ಹೊಸ ಹೋರಾಟದ ದಾರಿ ಹುಡುಕಲಿದೆ ಎಂದು ಹೇಳುವ ಮೂಲಕ ತಣ್ಣಗಾಗಿರುವ ವಿವಾದವನ್ನು ಮತ್ತೆ ಕೆದಕುತ್ತಿದ್ದಾರೆ ಎಂದು ಅಶೋಕ್ ಆರೋಪಿಸಿದರು.
ನಿಷೇಧಕ್ಕೆ ಆಗ್ರಹ: ಬೆಳಗಾವಿಗೆ ಆಗಮಿಸಿ ಸೌಹಾರ್ದತೆಗೆ ಭಂಗ ತರುವ ಹೇಳಿಕೆಗಳನ್ನು ನೀಡಿ, ವಿಷ ಬೀಜ ಬಿತ್ತುವ ಮಹಾರಾಷ್ಟ್ರ ಸಚಿವರುಗಳು ಇನ್ನು ಮುಂದೆ ಬೆಳಗಾವಿಗೆ ಬಾರದಂತೆ ನಿಷೇಧಿಸುವಂತೆ ಕರ್ನಾಟಕ ಸರ್ಕಾರವನ್ನು ಇಲ್ಲಿನ ಎಲ್ಲ ಕನ್ನಡ ಸಂಘಟನೆಗಳೂ ಆಗ್ರಹಿಸುತ್ತವೆ ಎಂದು ಹೇಳಿದರು.
1978ರಲ್ಲಿ ಇಲ್ಲಿಗೆ ಆಗಮಿಸಿದ್ದ ಸಂದರ್ಭದಲ್ಲಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದ ಅಂದಿನ ಕೇಂದ್ರ ಸಚಿವ ಮಧು ದಂಡವತೆ ಅವರಿಗೆ ದಿವಂಗತ ಪ್ರಧಾನಿ ಮುರಾರ್ಜಿ ದೇಸಾಯಿ ಅವರು ತಕ್ಕ ಶಾಸ್ತಿ ಮಾಡಿದ್ದರು ಎಂಬುದನ್ನು ಅವರು ಸ್ಮರಿಸಿದರು. ಈ ವಿಷಯವನ್ನು ಪ್ರಧಾನಿಯವರೊಂದಿಗೆ ಚರ್ಚಿಸುವಂತೆ ತಾವು ರಾಮಕೃಷ್ಣ ಹೆಗಡೆ ಅವರನ್ನು ಕೋರಿರುವುದಾಗಿಯೂ ಅವರು ತಿಳಿಸಿದರು.
(ಯು.ಎನ್.ಐ)