ಗ್ಯಾಸ್ ಸಿಲಿಂಡರ್ ಸೋರಿಕೆ, ಮಾರುತಿ ವ್ಯಾನ್ ಬೆಂಕಿಗಾಹುತಿ
ಬೆಂಗಳೂರು : ಎಚ್.ಎ.ಎಲ್. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಿಸಿ ಕಟ್ಟಡ ಕುಸಿದು, ಮಗುವೊಂದು ಬಲಿಯಾದ ಘಟನೆ ಸಂಭವಿಸಿದ 24 ಗಂಟೆಗಳೊಳಗೇ ನಗರದಲ್ಲಿ ಮತ್ತೊಂದು ಗ್ಯಾಸ್ ಸಿಲಿಂಡರ್ ಸೋರಿಕೆ ದುರಂತ ಸಂಭವಿಸಿದೆ.
ಶುಕ್ರವಾರ ಬೆಳಗ್ಗೆ ಕ್ವೀನ್ಸ್ ರಸ್ತೆಯ ಇಂಡಿಯನ್ ಇನ್ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ ಬಳಿಯ ಬಾಳೆಕುಂದ್ರಿ ವೃತ್ತದಲ್ಲಿ ವೆಲ್ಡಿಂಗ್ಗೆ ಉಪಯೋಗಿಸುವ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಮಾರುತಿ ವ್ಯಾನ್ ಬೆಂಕಿಗಾಹುತಿಯಾಯಿತು. ಆದರೆ ಆಶ್ಚರ್ಯಕರ ರೀತಿಯಲ್ಲಿ ಕಾರಿನಲ್ಲಿದ್ದ ಎಲ್ಲ ನಾಲ್ಕು ಮಂದಿಯೂ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಚಾಮರಾಜಪೇಟೆಯಲ್ಲಿ ಕೆಟ್ಟು ನಿಂತಿದ್ದ ಕಾರಿನ ರಿಪೇರಿಗಾಗಿ ಮಂಗಳೂರಿನ ಮೆಕ್ಯಾನಿಕ್ ಜತೆಯಲ್ಲಿ ಈ ಗ್ಯಾಸ್ ಸಿಲಿಂಡರ್ ಅನ್ನು ಸಾಗಿಸಲಾಗುತ್ತಿತ್ತು. ಗ್ಯಾಸ್ ಸೋರಿಕೆಯಿಂದ ಬೆಂಕಿ ಹತ್ತಿಕೊಂಡಿದ್ದರಿಂದ ವ್ಯಾನ್ನಲ್ಲಿದ್ದವರು ಇಳಿದು ಪರಾರಿಯಾಗಿದ್ದಾರೆ. ವ್ಯಾನ್ ಭಾಗಶಃ ಸುಟ್ಟು ಹೋಗಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಶಿವಾಜಿನಗರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮನೆ ಸ್ಫೋಟಕ್ಕೆ ಗ್ಯಾಸೇ ಕಾರಣ : ಎಚ್.ಎ.ಎಲ್. ಪೊಲೀಸ್ ಠಾಣೆ ವ್ಯಾಪ್ತಿಯ ಮಾರತ್ಹಳ್ಳಿ ಅಶ್ವತ್ಥನಗರದಲ್ಲಿ ಗುರುವಾರ ಬೆಳಗ್ಗೆ ಮಗುವನ್ನು ಬಲಿತೆಗೆದುಕೊಂಡ ಆರ್.ಸಿ.ಸಿ. ಕಟ್ಟಡದ ಕುಸಿತಕ್ಕೆ ಗ್ಯಾಸ್ ಸಿಲಿಂಡರ್ ಸ್ಫೋಟವೇ ಕಾರಣ ಎಂದು ತಜ್ಞರ ತಪಾಸಣೆಯ ನಂತರ ಪೊಲೀಸರು ಸ್ಪಷ್ಟ ಪಡಿಸಿದ್ದಾರೆ.
ಆರ್.ಸಿ.ಸಿ. ಕಟ್ಟಡ ಮುಕ್ಕಾಲು ಭಾಗ ಕುಸಿದಿದ್ದರಿಂದ ಇದು ಬಾಂಬ್ ಸ್ಫೋಟ ಇರಬಹುದು ಎಂದು ಶಂಕಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಫೋಟಕ ತಜ್ಞರು ತಪಾಸಣೆ ಮಾಡಿ, ಅಧ್ಯಯನ ನಡೆಸಿದ ಬಳಿಕ ಸ್ಫೋಟ ಗ್ಯಾಸ್ ಸಿಲಿಂಡರ್ನಿಂದಲೇ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದರು.
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...