ತೂರು ಚೆಂಡಾಟವಾದ ಚೆಂಡು- ದಾಂಡಾಟ : ಒಬ್ಬನ ಬಲಿ
ಕೋಲ್ಕಟ : ಒಂದೆಡೆ ಅಂತರರಾಷ್ಟ್ರೀಯ ಕ್ರಿಕೆಟಿಗರಲ್ಲಿ ಕಳ್ಳರಾರು ಎಂಬುದನ್ನು ಪತ್ತೆ ಹಚ್ಚುವ ಕೆಲಸ ಎಡೆಬಿಡದೆ ನಡೆಯುತ್ತಿದ್ದರೆ, ಮತ್ತೊಂದೆಡೆ ಇದೇ ಆಟ 55ರ ಹರೆಯದ ಒಬ್ಬರನ್ನು ಬಲಿ ತೆಗೆದುಕೊಂಡಿದೆ.
ಪಶ್ಚಿಮ ಬಂಗಾಳದ ಓಮೊರ್ಪುರ್ ಹಾಗೂ ಕೆಜುರ್ಹತಿ ಹಳ್ಳಿಗಳ ಹುಡುಗರು ಖಂಡಕೋಶ್ ಪೊಲೀಸ್ ಠಾಣೆ ವ್ಯಾಪ್ತಿಯ ಮೈದಾನದಲ್ಲಿ ಮಂಗಳವಾರ ಕ್ರಿಕೆಟ್ ಆಡುತ್ತಿದ್ದಾರೆ. ಅಂಪೈರ್ ಒಬ್ಬ ಹುಡುಗ ಔಟೆಂದು ತೀರ್ಪಿತ್ತಿದ್ದಾನೆ. ಹುಡುಗ ತಾನು ನಾಟೌಟ್ ಎಂದು ವಾದಿಸಿದ್ದಾನೆ. ಮಾತಿಗೆ ಮಾತು ಬೆಳೆದು ಚೆಂಡಾಟ ತೂರು ಚೆಂಡಾಟವಾಗಿದೆ. ಎರಡೂ ಹಳ್ಳಿಗಳ ಮಂದಿ ಜಮಾಯಿಸಿದ್ದಾರೆ. ಹುಡುಗರಿಂದ ಆರಂಭವಾದ ಗಲಾಟೆ ಎರಡೂ ಹಳ್ಳಿ ಗಳ ಜನರ ನಡುವಣ ಗಲಾಟೆಯಾಗಿ ಬೆಳೆದುಬಿಟ್ಟಿದೆ. ಓಮೊರ್ಪುರದ ತರಪದ ಖರತ್ ಎಂಬ 55 ವರ್ಷದ ವ್ಯಕ್ತಿಗೆ ಮೇಲಿಂದ ಮೇಲೆ ಹಲ್ಲೆಯಾಗಿದೆ. ಪರಿಣಾಮ ಆತನ ಪ್ರಾಣಪಕ್ಷಿ ಹಾರಿಹೋಗಿದೆ.
ಪೊಲೀಸರು ಗಲಾಟೆ ಮುಗಿಯೋ ಹೊತ್ತಿಗೆ ಆಗಮಿಸಿ, 15 ಮಂದಿಯನ್ನು ಬಂಧಿಸಿ, ಠಾಣೆಗೊಯ್ದಿದ್ದಾರೆ. ತಪ್ಪಿತಸ್ಥರು ಯಾರೆಂಬುದರ ಪತ್ತೆ ಇನ್ನೂ ಆಗಿಲ್ಲ.
(ಯುಎನ್ಐ)