ರೈತನ ಕಣ್ಣೀರೊರೆಸಲು ‘1 ಕೋಟಿ ಕಿಸಾನ್ ಕಾರ್ಡ್ ಯೋಜನೆ’
ಚೆನ್ನೈ: ಪ್ರಸ್ತುತ ವರ್ಷದಲ್ಲಿ ರೈತರಿಗೆ ಸುಲಭ ಸಾಲ ದಕ್ಕುವಂತೆ ಮಾಡಲು 1 ಕೋಟಿ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಬಾಳಾ ಸಾಹೇಬ್ ವಿಖೆ ಪಾಟೀಲ್ ಹೇಳಿದ್ದಾರೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಸವಲತ್ತಿಗೆ ರೈತರಿಂದ ಕಂಡಾಪಟ್ಟೆ ಪ್ರತಿಕ್ರಿಯೆ ಬಂದಿದ್ದು, ಈವರೆಗೆ 50 ಲಕ್ಷ ರೈತರು ಕ್ರೆಡಿಟ್ ಕಾರ್ಡ್ ಪಡೆದಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳಡಿ ವಿಜಯಾ ಬ್ಯಾಂಕ್ ನೀಡಿದ ಸಾಲವನ್ನು ಆವಡಿಯಲ್ಲಿ ಗುರುವಾರ ವಿತರಿಸಿ, ಸಚಿವರು ಮಾತನಾಡುತ್ತಿದ್ದರು.
ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಧಿಯ ವ್ಯಾಪ್ತಿಯನ್ನು ಸರ್ಕಾರ ವಿಸ್ತರಿಸಿದ್ದು, ಗ್ರಾಮ ಪಂಚಾಯಿತಿಗಳು, ಸ್ವಸಹಾಯ ಗುಂಪುಗಳು ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಅನುಷ್ಟಾನಕ್ಕೆ ತರಲು ಇನ್ನಷ್ಟು ಹಣಕಾಸಿನ ನೆರವು ದೊರೆಯಲಿದೆ. ಸ್ವಸಹಾಯ ಗುಂಪುಗಳ ಉತ್ಸಾಹ ಹಾಗೂ ಕಳಕಳಿಯನ್ನು ಸರ್ಕಾರ ಮನಗಂಡಿದ್ದು, ಅವುಗಳಿಗೆ ಕೈಸಡಿಲಿಸಿ ದುಡ್ಡು ಕಾಸಿನ ಸಹಾಯ ಮಾಡುವಂತೆ ಬ್ಯಾಂಕುಗಳಿಗೆ ನಿರ್ದೇಶನ ಕೊಡಲಾಗಿದೆ ಎಂದರು.
ದೇಶದ ಎಲ್ಲಾ 6 ಲಕ್ಷ ಹಳ್ಳಿಗಳಲ್ಲೂ ಸ್ವಸಹಾಯ ಗುಂಪುಗಳು ಹುಟ್ಟಬೇಕು. ದಲ್ಲಾಲಿಗಳ- ಮಧ್ಯವರ್ತಿಗಳ ಸ್ವಾರ್ಥಕ್ಕೆ ಬಲಿಪಶು ಆಗುತ್ತಿರುವ ರೈತನ ಕಣ್ಣೀರನ್ನು ಅವು ಒರೆಸಬೇಕು. ಅನ್ನ- ಬಟ್ಟೆ, ಮನೆ- ಶಾಲೆ ಇಂಥ ಮೂಲಭೂತ ಅಗತ್ಯಗಳನ್ನು ಕಡು ಬಡ ರೈತರು ಪೂರೈಸಿಕೊಳ್ಳಲು ನೆರವಾಗಬೇಕು ಎಂದು ಸಲಹೆ ಕೊಟ್ಟರು.
(ಪಿಟಿಐ)