ಚಿತ್ತಾಪುರ: ಜನರಿಂದಲೇ ಮಂತ್ರವಾದಿಯ ಬಂಧನ
ಚಿತ್ತಾಪುರ: ಬಾನಾಮತಿ ಮಾಡಿ ಜನರನ್ನು ಪೀಡಿಸುತ್ತಿದ್ದ ಮಾಂತ್ರಿಕನೊಬ್ಬನನ್ನು ಊರಿನ ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಪ್ರಕರಣ ಇಲ್ಲಿಗೆ ಸಮೀಪದ ಮರಗೊಳದಿಂದ ವರದಿಯಾಗಿದೆ.
ಆದಪ್ಪ ಎಂಬ ಮಾಂತ್ರಿಕನು ರಾತ್ರಿ ಸುಮಾರು 12 ಗಂಟೆಯ ಸಮಯದಲ್ಲಿ ಮನೆಯ ಮಾಳಿಗೆಯ ಮೇಲೆ ಕುಳಿತು ಮಾಟಾ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಇದೇ ಗ್ರಾಮದ ಮಹಿಳೆಯಾಬ್ಬರಿಗೆ ಮಾಟ ಮಾಡಿ ಕೈಕಾಲು ಸ್ವಾಧೀನ ಇಲ್ಲದ ರೀತಿ ಮಾಡಿದ್ದ ಎಂದೂ ಆರೋಪಿಸಲಾಗಿದೆ.
ಗ್ರಾಮದಲ್ಲಿ ಹಲವಾರು ಕುರಿಗಳು, ದನಕರುಗಳು ಮರಣ ಹೊಂದಿದ್ದು, ಇದಕ್ಕೆ ಮಾಂತ್ರಿಕನೇ ಕಾರಣ ಎಂಬುದು ಊರಿನವರ ಆರೋಪ. ಯಾದಗಿರಿ ತಾಲೂಕಿನವನಾದ ಮಾಂತ್ರಿಕನು ಬಳಸುತ್ತಿದ್ದ ತಲೆ ಬುರುಡೆಗಳು, ಖಡ್ಗ, ದೇವರ ಫೋಟೋ, ಮಂತ್ರದ ಪುಸ್ತಕಗಳು, ಓಲೆ ಗರಿಗಳು, ಮಣ್ಣಿನ ಬೊಂಬೆಗಳು, ನಿಂಬೇ ಹಣ್ಣುಗಳು ಹಾಗೂ ಸೂಜಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಾನು ಆನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಪರವಾಗಿ ಪೂಜೆ ಮಾಡುತ್ತಿದ್ದೆನೇ ವಿನಾ ಮಾಟ ಮಾಡುತ್ತಿರಲಿಲ್ಲ ಎಂದು ಮಾಂತ್ರಿಕ ಹೇಳಿಕೆ ನೀಡಿದ್ದಾನೆ. ಆದರೆ, ಇದನ್ನು ನಂಬದ ಊರಿನ ಜನರು, ಮಂತ್ರವಾದಿ ಬಳಸುತ್ತಿದ್ದ ವಸ್ತುಗಳನ್ನು ಮಂತ್ರವಾದಿಯ ತಲೆಯ ಮೇಲೆ ಹೊರಿಸಿಕೊಂಡು ಚಿತ್ತಾಪುರ ಪೊಲೀಸ್ ಠಾಣೆಗೆ ಕರೆದೊಯ್ದು ಒಪ್ಪಿಸಿದ್ದಾರೆ. ದೂರೂ ದಾಖಲಿಸಿದ್ದಾರೆ. ಈಗ ಈ ಮಂತ್ರವಾದಿಯನ್ನು ಗುಲ್ಬರ್ಗಾ ಕಾರಾಗೃಹದಲ್ಲಿರಿಸಲಾಗಿದೆ.
(ಇನ್ಫೋ ವಾರ್ತೆ)