ಗೆದ್ದಲು ಹತ್ತಿರೋ ಕೇಸುಗಳ ಶೀಘ್ರ ವಿಲೇವಾರಿಗೆ ‘ಜಲ್ದಿ ಚುಕ್ತಾ ಕೋರ್ಟು’
ಬೆಂಗಳೂರು : ವಿಲೇವಾರಿಯಾಗದೆ ಕೋರ್ಟಿನ ಕಟಕಟೆಯಲ್ಲಿ ಬಹು ದಿನಗಳ ಕಾಲ ಕೇಸು ಕೊಳೆಯೋದನ್ನ ತಪ್ಪಿಸಲು ಪ್ರತಿ ಜಿಲ್ಲೆಯಲ್ಲೂ ಫಾಸ್ಟ್ ಟ್ರ್ಯಾಕ್ (ಜಲ್ದಿ ಚುಕ್ತಾ) ಕೋರ್ಟು ಸ್ಥಾಪಿಸುವುದಾಗಿ ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅರುಣ್ ಜೈಟ್ಲಿ ಶುಕ್ರವಾರ ತಿಳಿಸಿದ್ದಾರೆ.
ನ್ಯಾಷನಲ್ ಲಾ ಸ್ಕೂಲ್ ಯೂನಿವರ್ಸಿಟಿ ಆಫ್ ಇಂಡಿಯಾದಲ್ಲಿ ನಡೆದ ‘ಕಾನೂನು ವ್ಯವಸ್ಥೆಯ ವಿಳಂಬ ಪ್ರಕ್ರಿಯೆಯ ನಿವಾರಣೆ’ ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತಾಡುತ್ತಿದ್ದರು. ವಿತ್ತ ಸಚಿವಾಲಯ ದ 502 ಕೋಟಿ ರುಪಾಯಿ ವಿಶೇಷ ನೆರವಿನಿಂದ ದೇಶಾದ್ಯಂತ ಒಟ್ಟು 1700 ಜಲ್ದಿ ಚುಕ್ತಾ ಕೋರ್ಟುಗಳನ್ನು ಸ್ಥಾಪಿಸಲಾಗುವುದು. ಈ ಕುರಿತಂತೆ ಚರ್ಚಿಸಲು ಸದ್ಯದಲ್ಲೇ ಮುಖ್ಯಮಂತ್ರಿಗಳ ಸಭೆ ಕರೆಯಲಾಗುವುದು ಎಂದು ಸಚಿವರು ಹೇಳಿದರು.
ಸುಮಾರು 5 ವರ್ಷಗಳಷ್ಟು ಹಳೆಯ ಪ್ರಕರಣಗಳನ್ನು ಈ ಕೋರ್ಟುಗಳು ಕೈಗೆತ್ತಿಕೊಳ್ಳಲಿವೆ. ಇನ್ನೂ ಪ್ರಕರಣ ಇತ್ಯರ್ಥವಾಗದೆ ಜೈಲು ಶಿಕ್ಷೆ ಅನುಭವಿಸುತ್ತಿರುವವರ ವಿಚಾರಣೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು. ಪ್ರಸ್ತುತ ಅಧೀನ ನ್ಯಾಯಾಲಯಗಳಲ್ಲಿ ಸುಮಾರು 2 ಕೋಟಿ ಸಿವಿಲ್ ಪ್ರಕರಣಗಳು ವಿಲೇವಾರಿಯಾಗದೆ ಕೊಳೆಯುತ್ತಿವೆ. ಸಾಲದ್ದಕ್ಕೆ ಕಳೆದೊಂದು ದಶಕದಲ್ಲಿ ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸೇರ್ಪಡೆ ಪ್ರಮಾಣ ಕಂಡಾಪಟ್ಟೆ ಏರುತ್ತಿದೆ. ಇದು ಹೀಗೇ ಮುಂದುವರೆದರೆ ನ್ಯಾಯ ದಕ್ಕಿಸಿಕೊಳ್ಳುವುದೇ ಒಂದು ಮರೀಚಿಕೆಯಾದೀತು ಎಂದು ಸಚಿವರು ಹೇಳಿದರು.
(ಯುಎನ್ಐ)