ಚಂಡಮಾರುತ: ರಾಜ್ಯದಲ್ಲಿ ಮಳೆ ಸಂಭವ
ಬೆಂಗಳೂರು : ದಕ್ಷಿಣ ತಮಿಳುನಾಡಿನಲ್ಲಿ ಬೀಸುತ್ತಿರುವ ಚಂಡಮಾರುತ ತೀವ್ರಗತಿಯಲ್ಲಿ ಸಾಗಿದ್ದು, ಟುಟಿಕಾರನ್ ಹಾಗೂ ಪಂಬಂದ ನಡುವಿನ ಸಮುದ್ರದಲ್ಲಿ ಸಹಜಸ್ಥಿತಿಗಿಂತಲೂ ಹೆಚ್ಚು ಉಬ್ಬರಗಳನ್ನು ಸೃಷ್ಟಿಸಿದೆ. ಚಂಡಮಾರುತದ ಪರಿಣಾಮವಾಗಿ ಕರ್ನಾಟಕದ ಕೆಲವೆಡೆಯೂ ಮಳೆ ಬೀಳುವ ಸಂಭವ ಇದೆ.
ಬೆಂಗಳೂರಿನಲ್ಲಂತೂ ಗುರುವಾರ ಬೆಳಗ್ಗಿನಿಂದಲೇ ಮೋಡ ಮುಸುಕಿದೆ. ಗಂಟೆಗೆ ಸುಮಾರು 140ರಿಂದ 160 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಚಂಡಮಾರುತದ ಪ್ರಭಾವ ಬೆಂಗಳೂರಿನ ಮೇಲೂ ಬೀರಿದೆ. ಆದರೆ, ಈವರೆಗೆ ಬೆಂಗಳೂರಲ್ಲಿ ಮಳೆಯ ಸುಳಿವಿಲ್ಲ. ಈ ಮಧ್ಯೆ ರಾಜ್ಯದಲ್ಲಿ ಒಣಹವೆ ಮುಂದುವರಿದಿದೆ.
ಕರಾವಳಿ ತೀರದಲ್ಲಿ ಕನಿಷ್ಠ ತಾಪಮಾನ ಕೊಂಚ ಬದಲಾಗಿದ್ದು, ಸಾಮಾನ್ಯ ಮಟ್ಟಕ್ಕಿಂತಲೂ ಕಡಿಮೆ ಇತ್ತು. ಉತ್ತರ ಹಾಗೂ ದಕ್ಷಿಣ ಒಳನಾಡುಗಳಲ್ಲಿ ತಾಪಮಾನ ಕಡಿಮೆ ಆಗಿತ್ತು. ರಾಜ್ಯದಲ್ಲಿ ಅತಿ ಕಡಿಮೆ ತಾಪಮಾನ ಗುಲ್ಬರ್ಗಾದಲ್ಲಿ 9.4 ಡಿಗ್ರಿ ಸೆಲ್ಸಿಯಸ್ ಇತ್ತು.
ಹವಾಮಾನ ವೀಕ್ಷಣಾಲಯದ ಮುನ್ಸೂಚನೆಯಂತೆ ಮುಂದಿನ 48 ಗಂಟೆಗಳ ಅವಧಿಯಲ್ಲಿ ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆ ಅಥವಾ ಗುಡುಗಿನಿಂದ ಕೂಡಿದ ಸುರಿಮಳೆ ಬೀಳುವ ಸಾಧ್ಯತೆ ಇದೆ. ಉಳಿದಂತೆ ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದೆ. ಬೆಂಗಳೂರು ಹಾಗೂ ಸುತ್ತ ಮುತ್ತ ಮೋಡ ಮುಸುಕಿದ ವಾತಾವರಣ ಇದ್ದು, ಕನಿಷ್ಠ ತಾಪಮಾನ 16 ಡಿಗ್ರಿಯ ಆಸುಪಾಸಿನಲ್ಲಿರುತ್ತದೆ.