ಶಿವರಾತ್ರಿಗೆ ಮೊದಲೇ ನಗರದಲ್ಲಿ ನೃತ್ಯ, ಸಂಗೀತ ಜಾಗರಣೆ
ಬೆಂಗಳೂರು : ಬೇಡರ ಕಣ್ಣಪ್ಪನ ಭಕ್ತಿಯ ನೆನೆದು ಶಿವರಾತ್ರಿಯ ದಿನ ಜಾಗರಣೆ ಮಾಡುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ಆದರೆ, ನಗರದಲ್ಲಿ ಹೊಸವರ್ಷದ ಪ್ರಥಮ ವಾರದಲ್ಲೇ ಶಿವರಾತ್ರಿಯ ಜಾಗರಣೆ ನಡೆಯಲಿದೆ.
ಪಂಡಿತ್ ತಾರಾನಾಥ್ ಅವರ ಜನ್ಮ ದಿನವಾದ ಜನವರಿ 6ರ ಶನಿವಾರ ಇಡೀ ರಾತ್ರಿ ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಸಂಗೀತ ಸುಧೆ ಹರಿಯಲಿದೆ. ನೃತ್ಯ ವೈಭವ ಕಣ್ಮನ ಸೆಳೆಯಲಿದೆ. ನಾದ ನೃತ್ಯ ಪ್ರಿಯರಿಗೆ ಹೊಸವರ್ಷದ ವಿನೂತನ ಕೊಡುಗೆ ನೀಡಲು ಉದ್ದೇಶಿಸಿರುವ ಪಂಡಿತ್ ತಾರಾನಾಥ್ ಫೌಂಡೇಷನ್ ಜನವರಿ 6ರ ರಾತ್ರಿ 10 ಗಂಟೆಯಿಂದ ಭಾನುವಾರ ಬೆಳಗ್ಗೆ 6 ಗಂಟೆಯ ತನಕ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.
ಪ್ರತಿಭಾ ಪ್ರಹ್ಲಾದ್ ಅವರ ನೃತ್ಯ, ನರಸಿಂಹಲು ವಡವಾಟಿ ಅವರ ಕ್ಲಾರಿಯೋನೆಟ್, ನೀಲಾ ಭಾಗವತರ್ ಮತ್ತು ಪರಮೇಶ್ವರ ಹೆಗಡೆ ಅವರ ಹಾಡುಗಾರಿಕೆ, ರಾಜೀವ್ ತಾರಾನಾಥರ ಸರೋದ್ ವಾದನ, ಹೆಹಲಿಯ ಭಜನೇ ಸೋಂಸ್ಲೆಯವರ ಸಂತೂರ್ ಪ್ರೇಕ್ಷಕರ ಮನ ರಂಜಿಸಲಿದೆ.
ಈ ಕಾರ್ಯಕ್ರಮದಲ್ಲಿ ನಾಡಿನ ಪ್ರಸಿದ್ಧ ಸಾಂಸ್ಕೃತಿಕ ವಕ್ತಾರರಲ್ಲದೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ವಾರ್ತಾ ಸಚಿವರಾದ ಪ್ರೊ. ಬಿ.ಕೆ. ಚಂದ್ರಶೇಖರ್ ಪಾಲ್ಗೊಳ್ಳುವರು ಎಂದು ತಾರಾನಾಥ್ ದತ್ತಿ ಸಂಸ್ಥೆಯ ಮುಖ್ಯ ಟ್ರಸ್ಟಿ ರಾಜೀವ್ ತಾರಾನಾಥ್ ತಿಳಿಸಿದ್ದಾರೆ.