ಬಿಸಿಸಿಐ ತನಗೆ ಕೊಟ್ಟ ಶಿಕ್ಷೆ ಪ್ರಶ್ನಿಸಿ ಕೋರ್ಟಿಗೆಹೋಗಲು ಅಜರ್ ಸಿದ್ಧತೆ
ಹೈದರಾಬಾದ್ : ಆಜೀವ ಪರ್ಯಂತ ಕ್ರಿಕೆಟ್ ರಂಗಕ್ಕೆ ಕಾಲಿಡಬಾರದೆಂಬ ಶಿಕ್ಷೆಗೆ ಒಳಗಾಗಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್, ಬಿಸಿಸಿಐನ ನಿರ್ಣಯ ಪ್ರಶ್ನಿಸಿ ಕೋರ್ಟಿನ ಕಟಕಟೆ ಹತ್ತಲು ಹೋಂ ವರ್ಕ್ ಮಾಡುತ್ತಿದ್ದಾರೆ.
ಅಜರ್ ಕೋರ್ಟಿಗೆ ಹೋಗೋದಂತೂ ನಿಜ. ಹೈದರಾಬಾದ್ ಹೈಕೋರ್ಟಿನ ಮೆಟ್ಟಿಲು ಹತ್ತಬೇಕೋ ಅಥವಾ ಜಿಲ್ಲಾ ಕೋರ್ಟಿಗೆ ಹೋಗಬೇಕೋ ಎಂಬುದು ಇನ್ನೂ ನಿರ್ಧರಿತವಾಗಿಲ್ಲ ಎಂದು ಅಜರ್ ಸಲಹೆಗಾರ ಹಾಗೂ ಕೇಂದ್ರದ ಮಾಜಿ ಕಾನೂನು ಸಚಿವ ಎಚ್.ಆರ್.ಭಾರದ್ವಾಜ್ ಬುಧವಾರ ತಿಳಿಸಿದ್ದಾರೆ.
ಪ್ರಸ್ತುತ ಅಜರ್, ಕಾನೂನು ಸಲಹೆಗಾರರ ಜೊತೆ ಕೋರ್ಟಿಗೆ ಹತ್ತಲು ಹೋಂವರ್ಕ್ ಮಾಡುವುದರಲ್ಲಿ ನಿರತರಾಗಿದ್ದಾರೆ. ಕ್ರಿಕೆಟ್ನಿಂದ 5 ವರ್ಷ ಅಮಾನತ್ತಿಗೆ ಒಳಗಾಗಿರುವ ಅಜಯ್ ಜಡೇಜ ಕೂಡ ಬಿಸಿಸಿಐ ನಿರ್ಣಯ ಪ್ರಶ್ನಿಸಿ ಕೋರ್ಟಿಗೆ ಹೋಗಲು ಮುನ್ನಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಮ್ಯಾಚ್ಫಿಕ್ಸಿಂಗ್ ನಾಟಕ ಬಯಲಿಗೆ ತಂದು, ತಾನೇ ಸಿಕ್ಕಿಬಿದ್ದು, ಕ್ರಿಕೆಟ್ ಆಜೀವ ನಿಷೇಧಕ್ಕೆ ಒಳಗಾಗಿರುವ ಮತ್ತೊಬ್ಬ ಕ್ರಿಕೆಟಿಗ ಮನೋಜ್ ಪ್ರಭಾಕರ್, ತನಗೆ ಅನ್ಯಾಯವಾಗಿದೆ ಎಂದು ಖುದ್ದು ಬಿಸಿಸಿಐಗೇ ಮನವಿ ಮಾಡಲಿದ್ದಾರೆ. ಅಲ್ಲಿ ನ್ಯಾಯ ಸಿಗದಿದ್ದಲ್ಲಿ ಕೋರ್ಟಿನ ಬಾಗಿಲು ತಟ್ಟುವ ಯೋಚನೆ ಅವರದು.
(ಪಿಟಿಐ)