ಮಠಾಧೀಶರಿಂದ ಧಾರ್ಮಿಕ ಟೀವಿ ಚಾನಲ್
ಹೊಳೆನರಸೀಪುರ : ಜನರಲ್ಲಿ ಧಾರ್ಮಿಕ ಭಾವನೆಯನ್ನು ಜಾಗೃತಗೊಳಿಸುವ ದೃಷ್ಟಿಯಿಂದ ಎಲ್ಲಾ ಮಠಾಧೀಶರು ಒಟ್ಟಾಗಿ ಒಂದು ಧಾರ್ಮಿಕ ಟೀವಿ ಚಾನಲ್ ಪ್ರಾರಂಭಿಸುವ ಅಗತ್ಯವಿದೆ ಎಂದು ಶ್ರೀಮನ್ಮಾಧ್ಯಾಚಾರ್ಯ ಮೂಲ ಸಂಸ್ಥಾನದ ಸತ್ಯಾತ್ಮತೀರ್ಥ ಸ್ವಾಮಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಖಾಸಗಿ ವಾಹಿನಿಗಳ ಭರಾಟೆಯಲ್ಲಿ ಧರ್ಮ, ವೇದಾಧ್ಯಯನದ ಬಗೆಗೆ ಜನ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಅವರಲ್ಲಿನ ಧಾರ್ಮಿಕ ಭಾವನೆಗಳು ನಶಿಸುತ್ತಿವೆ. ಅದುದರಿಂದ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ಚಾನಲ್ ಅಗತ್ಯವಿದೆ. ಇಂಥಾ ಚಾನಲ್ ಸ್ಥಾಪನೆಯಿಂದ ಜನರಲ್ಲಿನ ಧಾರ್ಮಿಕ ಭಾವನೆಗಳು ಜಾಗೃತಗೊಂಡು ಜಗತ್ತಿಗೆ ಒಳಿತಾಗುತ್ತದೆ ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸ್ವಾಮಿಗಳು ಹೇಳಿದರು.
ಮಕ್ಕಳು ಹಾದಿ ತಪ್ಪದಂತೆ ಪೋಷಕರು ಎಚ್ಚರಿಕೆ ವಹಿಸಬೇಕು. ಈಚಿನ ದಿನಗಳಲ್ಲಂತೂ ನಮ್ಮ ಯುವಕರು ಮಾದಕ ದ್ರವ್ಯಗಳಿಗೆ ಬಲಿಯಾಗುತ್ತಿದ್ದಾರೆ. ಇಂತಹ ದುಷ್ಟ ಚಟಗಳನ್ನು ನಿರ್ಮೂಲಗೊಳಿಸುವ ಉದ್ದೇಶದಿಂದ ತಮ್ಮ ಮಠದಿಂದ ಗುಟುಕ ಯಜ್ಞ ನಡೆಸಲಾಗುವುದು ಎಂದು ಸತ್ಯಾತ್ಮತೀರ್ಥ ಸ್ವಾಮಿ ಹೇಳಿದರು.
(ಇನ್ಪೊ ವಾರ್ತೆ)